ಬೆಂಗಳೂರು: ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಬೆಳಗಿನ ಜಾವಅಪಘಾತಕ್ಕೀಡಾಗಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಯುವಕರಿಬ್ಬರು ಸಾವಿಗೀಡಾಗಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಊರ್ಕೇನಹಳ್ಳಿ ಸಮೀಪ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸುನೀಲ್ ಕುಮಾರ್(27) ಮತ್ತು ಶಶಿಕುಮಾರ್(28) ಸಾವಿಗೀಡಾಗಿದ್ದು, ಒಬ್ಬ ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಶೃಂಗೇರಿ ಪ್ರವಾಸ ಮುಗಿಸಿ ಊರಿಗೆ ತೆರಳುತ್ತಿದ್ದ ಸ್ನೇಹಿತರು, ಮೂತ್ರ ವಿಸರ್ಜನೆಗಾಗಿರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾರುಗಳನ್ನು ನಿಲ್ಲಿಸಿ ಕೆಳಗಿಳಿದ್ದರು.ಇದೇ ಮಾರ್ಗದಲ್ಲಿ ಬಂದ ಸಿ.ಟಿ.ರವಿ ಅವರಿದ್ದ ಫಾರ್ಚುನರ್ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಎರಡು ಕಾರುಗಳಲ್ಲಿ 13 ಜನರು ಪ್ರಯಾಣಿಸುತ್ತಿದ್ದರು.
ಕನಕಪುರ ತಾಲ್ಲೂಕಿನ ಸೂರನಹಳ್ಳಿ ಗ್ರಾಮದ ಯುವಕರು ಕೊಲ್ಲೂರು, ಧರ್ಮಸ್ಥಳ ದೇವಾಲಯಗಳ ದರ್ಶನ ಮಾಡಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ.ಅಪಘಾತದಲ್ಲಿ ಶಾಸಕ ಸಿ.ಟಿ.ರವಿ ಸಹ ಗಾಯಗೊಂಡಿದ್ದಾರೆ.ಅಪಘಾತದ ಬಳಿಕ ಮತ್ತೊಂದು ಕಾರಿನಲ್ಲಿ ಅವರುಬೆಂಗಳೂರು ತಲುಪಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ.ಶವಗಳನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.