ಬೆಂಗಳೂರು: ಬಿಟಿಎಂ ಲೇಔಟ್ ಕ್ಷೇತ್ರದ ಸದಸ್ಯ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ಬಗ್ಗೆ ತೆಗೆದುಕೊಳ್ಳುವ ನಿಲುವಿನ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದ್ದು, ಇದು ಸರ್ಕಾರದ ಅಳಿವು, ಉಳಿವಿನ ಪ್ರಶ್ನೆಯಾಗುವ ಸಾಧ್ಯತೆಯೂ ಇದೆ.
ರಾಮಲಿಂಗಾ ರೆಡ್ಡಿ ಮನಸ್ಸು ಬದಲಿಸಿದರೆ, ಬೆಂಗಳೂರಿನ ಇತರ ಅತೃಪ್ತ ಶಾಸಕರ ನಿಲುವು ಸಹ ಬದಲಾಗಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಹೀಗಾಗಿ ಅವರ ಮನವೊಲಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಹಳೆಯ ತಪ್ಪನ್ನೆಲ್ಲ ಮನ್ನಿಸಿ, ಮುಂದೆ ಅವರಿಗೆ ಏನು ಬೇಕೋ ಅದೆಲ್ಲವನ್ನೂ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೂ ಅವರು ಇನ್ನೂ ತಮ್ಮ ಮನದಾಳದ ಮಾತನ್ನು ಆಡಿಲ್ಲ. ನಿರ್ಧಾರ ಪ್ರಕಟಿಸಿಲ್ಲ.
ಸೋಮವಾರ ಅವರು ವಿಧಾನಸಭಾ ಕಲಾಪಕ್ಕೆ ಬಂದಿರಲಿಲ್ಲ. ವಿಚಾರಣೆಗಾಗಿ ಕರೆದಿದ್ದ ವಿಧಾನಸಭಾಧ್ಯಕ್ಷರ ಮುಂದೆಯೂ ಹಾಜರಾಗಿಲ್ಲ.
ಸಮಯ ನೀಡಿದ ಸ್ಪೀಕರ್: ರಾಮಲಿಂಗಾ ರೆಡ್ಡಿ ಅವರು ಸ್ವತಃ ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಕರೆ ಮಾಡಿ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದರು. ಬಳಿಕ ಅವರು ನೀಡಿದ ಮಾಧ್ಯಮ ಪ್ರಕಟಣೆಯಲ್ಲೂತಮ್ಮ ಗೈರಿಗೆ ಕಾರಣ ನೀಡಿಲ್ಲ.
‘ನಿಮ್ಮ ಅನುಕೂಲ ನೋಡಿಕೊಂಡು ಮಂಗಳವಾರ ಅಥವಾ ಬುಧವಾರ ವಿಚಾರಣೆಗೆ ಹಾಜರಾಗಿ’ ಎಂದು ರಮೇಶ್ಕುಮಾರ್ ತಿಳಿಸಿದರು ಎಂದು ಸ್ಪೀಕರ್ ಕಚೇರಿ ಮೂಲಗಳು ತಿಳಿಸಿವೆ. ಅತೃಪ್ತ ಶಾಸಕರ ಗುಂಪಿನೊಂದಿಗೆ ಮುಂಬೈಯಲ್ಲೇ ಇರುವ ಗೋಪಾಲಯ್ಯ ಅವರು ನಿರೀಕ್ಷೆಯಂತೆಯೇ ಸಭಾಧ್ಯಕ್ಷರ ಮುಂದೆ ಹಾಜರಾಗಲಿಲ್ಲ. ಅವರುಸಚಿವಾಲಯ ಕಾರ್ಯದರ್ಶಿ ಅವರಿಗೆ ಕರೆ ಮಾಡಿ ತಾವು ಗೈರಾಗಲಿರುವ ವಿಷಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.