ADVERTISEMENT

ಕೆಪಿಎಸ್‌ಸಿ ಬಾಗಿಲು ತಟ್ಟಲಿರುವ ಸುರೇಶ್ ಕುಮಾರ್‌

​ಪ್ರಜಾವಾಣಿ ವಾರ್ತೆ
Published 29 ಮೇ 2022, 16:43 IST
Last Updated 29 ಮೇ 2022, 16:43 IST
ಎಸ್‌. ಸುರೇಶ್ ಕುಮಾರ್‌
ಎಸ್‌. ಸುರೇಶ್ ಕುಮಾರ್‌   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಪಾರದರ್ಶಕತೆ ಮತ್ತು ವೃತ್ತಿಪರತೆ ತರುವಂತೆ ಆಗ್ರಹಿಸಿ ಮಂಗಳವಾರ ಬೆಳಿಗ್ಗೆ ಆಯೋಗದ ಬಾಗಿಲು ತಟ್ಟುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

2021 ರ ಫೆಬ್ರುವರಿಯಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಇನ್ನೂ ಪ್ರಕಟಿಸಿಲ್ಲ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಪತ್ರ ಬರೆದಿದ್ದ ಸುರೇಶ್ ಕುಮಾರ್‌, ತಕ್ಷಣ ಫಲಿತಾಂಶ ಪ್ರಕಟಿಸುವಂತೆ ಆಗ್ರಹಿಸಿದ್ದರು. ಆದರೆ, ಆಯೋಗದಿಂದ ಸ್ಪಂದನೆ ಬಾರದ ಕಾರಣ ಈಗ ಪ್ರತಿಭಟನೆಗೆ ಮುಂದಾಗಿದ್ದಾರೆ.

‘ರಾಜ್ಯ ಸರ್ಕಾರದ ಆಡಳಿತ ಯಂತ್ರದ ನಿರ್ವಹಣೆಗೆ ದಕ್ಷ ಮತ್ತು ಸಮರ್ಥ ಮಾನವ ಸಂಪನ್ಮೂಲವನ್ನು ಸಕಾಲದಲ್ಲಿ ಒದಗಿಸಬೇಕಾದ ಕೆಪಿಎಸ್‌ಸಿ ತನ್ನ ನಿಷ್ಕ್ರಿಯತೆಯ ಮೂಲಕ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಂಸ್ಥೆಯ ಸ್ವಾಯತ್ತತೆಯೇ ಅದರ ಜವಾಬ್ದಾರಿ ನಿರ್ವಹಣೆಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಕಾಲದಲ್ಲಿ ಪರೀಕ್ಷೆ ಫಲಿತಾಂಶ ನಡೆಸದೇ, ವಿವಿಧ ಇಲಾಖೆಗಳ ನೇಮಕಾತಿ ಪಟ್ಟಿ ಅಂತಿಮಗೊಳಿಸದೇ ಇರುವುದರಿಂದ ತೊಂದರೆಯಾಗುತ್ತಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲವೆ? ಕೆಪಿಎಸ್‌ಸಿ ಹಲವು ವರ್ಷಗಳಿಂದ ಎಷ್ಟು ಪರೀಕ್ಷೆಗಳನ್ನು ನಡೆಸಿದೆ? ಎಷ್ಟರಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ? ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ? ವಿಳಂಬಕ್ಕೆ ಕಾರಣಗಳೇನು? ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಮುಖ್ಯವಾಹಿನಿಗೆ ತರಲು ಸಂಸ್ಥೆಯು ರೂಪಿಸಿದ ಕ್ರಿಯಾಯೋಜನೆ ಏನು? ಎಂಬ ಪ್ರಶ್ನೆಗಳೊಂದಿಗೆ ಕೆಪಿಎಸ್‌ಸಿ ಕಚೇರಿಯ ಬಾಗಿಲಿನ ಮುಂದೆ ಬುಧವಾರ ಬೆಳಿಗ್ಗೆ ನಿಲ್ಲುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.