ADVERTISEMENT

ಪ್ರಧಾನಿ ಅಭಿನಂದನೆಗೆ ಅಭಿಯಾನ ವಿವಾದ ಸಂಚು ಎಂದ ಮೋದಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 20:15 IST
Last Updated 8 ಏಪ್ರಿಲ್ 2020, 20:15 IST
ವೈರಲ್ ಆಗಿರುವ ಪೋಸ್ಟರ್‌
ವೈರಲ್ ಆಗಿರುವ ಪೋಸ್ಟರ್‌   

ಬೆಂಗಳೂರು: ‘ನರೇಂದ್ರ ದಾಮೋದರ ದಾಸ್ ಮೋದಿ ಅವರು ದೇಶಕ್ಕಾಗಿ ತುಂಬಾ ಕೆಲಸ ಮಾಡಿದ್ದಾರೆ. ಇದೇ ಭಾನುವಾರ ಏಪ್ರಿಲ್ 12ರ ಸಂಜೆ ಐದು ಗಂಟೆಗೆ ಚಪ್ಪಾಳೆ ಹೊಡೆದು ಅವರಿಗೆ ಅಭಿನಂದನೆ ಸಲ್ಲಿಸೋಣ. ಐದು ಗಂಟೆಗೆ ನಿಮ್ಮ ಬಾಲ್ಕನಿಯಲ್ಲಿ ನಿಂತು, ಮೋದಿ ಅವರನ್ನು ಅಭಿನಂದಿಸಿ’ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಇದು ನನ್ನನ್ನು ವಿವಾದಕ್ಕೆ ಸಿಲುಕಿಸುವ ಪ್ರಯತ್ನ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌ ಮತ್ತು ಫೇಸ್‌ಬುಕ್‌ಗಳಲ್ಲಿಈ ಪೋಸ್ಟರ್ ಹರಿದಾಡುತ್ತಿದೆ. ವಾಟ್ಸ್‌ಆ್ಯಪ್‌ ಗುಂಪುಗಳಲ್ಲೂ ಇದು ವೈರಲ್ ಆಗಿದೆ. ಆದರೆ, ಇಂತಹ ಅಭಿನಂದನೆಯ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

‘ನನಗೆ ಅಭಿನಂದಿಸಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ನನ್ನನ್ನು ವಿವಾದಕ್ಕೆ ಸಿಲುಕಿಸುವ ಪ್ರಯತ್ನ ಎಂದು ನನಗೆ ಅನಿಸುತ್ತಿದೆ’ ಎಂದು ಮೋದಿ ಟ್ವೀಟ್‌ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇದು ಒಳ್ಳೆಯ ಉದ್ದೇಶದ ಪ್ರಯತ್ನವೂ ಆಗಿರಬಹುದು. ನನಗೆ ಸನ್ಮಾನ ಮಾಡಬೇಕು ಎಂದುಕೊಂಡಿದ್ದರೆ, ಕೊರೊನಾ ಹಾವಳಿ ಮುಗಿಯುವವರೆಗೂ ಒಂದು ಬಡ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಿ. ಅದೇ ನನಗೆ ನೀವು ಮಾಡುವ ಸನ್ಮಾನ’ ಎಂದೂ ಮೋದಿ ಹೇಳಿದ್ದಾರೆ. ಪ್ರಸಾರ ಭಾರತಿ ಸಹ ಈ ಪೋಸ್ಟರ್‌ ಬಗ್ಗೆ ಟ್ವೀಟ್ ಮಾಡಿದ್ದು, ಈ ಪೋಸ್ಟರ್‌ಗೆ ಯಾರೂ ಗಮನ ಕೊಡಬೇಡಿ ಎಂದು ಕೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.