ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಬಾಚೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಸಮೀಪದ ಮಾರ್ಚಹಳ್ಳಿಯ ಮಹಮ್ಮದ್ ರಾಖೀಬ್ ಅವರು ಸುಮಾರು ₹ 60 ಲಕ್ಷ ಮೌಲ್ಯದ ಎರಡೂವರೆ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಸಣ್ಣ ವ್ಯಾಪಾರಿಯಾದ ಅವರು ಶ್ರೀಮಂತರೇನೂ ಅಲ್ಲ. ‘ತಂದೆ ಮಹಮ್ಮದ್ ಜಾಫರ್ ಬದುಕಿದ್ದಾಗ ಶಾಲೆಯ ಸಮೀಪ 10 ಎಕರೆ ಜಾಗವನ್ನು ಖರೀದಿಸಿದ್ದರು. ಅದರಲ್ಲಿ ಸ್ವಲ್ಪ ಭಾಗವನ್ನು ಶಾಲೆಗೆ ನೀಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ದಾನ ಮಾಡಿದ್ದೇವೆ’ ಎಂದು ಮಹಮ್ಮದ್ ರಾಖೀಬ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಫೆ.15ರಂದು ಜಮೀನನ್ನು ಶಾಲೆ ಹೆಸರಿಗೆ ನೋಂದಣಿ ಮಾಡಿಸಿ, ದಾನಪತ್ರವನ್ನು ನೀಡಿದ್ದಾರೆ. ಇಂಚು ಜಾಗಕ್ಕೂ ಹೊಡೆದಾಡಿಕೊಳ್ಳುವ ಕಾಲದಲ್ಲಿ ಭೂಮಿ ನೀಡಿರುವುದು ಶ್ಲಾಘನೀಯ. ಈ ಶಾಲೆಯಲ್ಲಿ 8 ಗ್ರಾಮದ 205 ಮಕ್ಕಳು ಓದುತ್ತಿದ್ದಾರೆ’ ಎಂದು ಎಚ್.ಡಿ.ಕೋಟೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.