ಚಿತ್ತಾಪುರ: ತೊಗರಿ ಬೆಳೆ ಕಟಾವಿಗೆ ಬಂದಿವೆ. ತೊಗರಿ ಬೆಳೆದ ಸಣ್ಣ ರೈತರಿಗೆ ಸರ್ಕಾರದ ಬೆಂಬಲ ಬೆಲೆ ಲಾಭ ಸಿಗಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಬೇಗ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ತೊಗರಿ ಬೆಳೆ ಕಟಾವು ಮಾಡಿ ರೈತರು ತೊಗರಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಜಿಲ್ಲಾಡಳಿತ ಮತ್ತು ಸರ್ಕಾರ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುತ್ತದೆ. ಇದರಿಂದ ರಾಶಿ ಮಾಡಿದ ರೈತರು ಕಡಿಮೆ ಬೆಲೆಗೆ ತೊಗರಿ ಮಾರಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಕೃಷಿ ಕೆಲಸಗಳಿಗೆ ರೈತರು ಸಾಲ ಮಾಡಿ ಬೆಳೆ ಬೆಳೆದಿರುತ್ತಾರೆ. ತೊಗರಿ ರಾಶಿ ಮಾಡಿದ ನಂತರ ಮಾರಾಟಕ್ಕೆ ಮುಂದಾಗುತ್ತಾರೆ. ಎಲ್ಲಾ ಸಣ್ಣ ರೈತರು ಬೇಗ ತೊಗರಿ ಮಾರುವುದರಿಂದ ತಡವಾಗಿ ಪ್ರಾರಂಭಿಸುವ ತೊಗರಿ ಖರೀದಿ ಕೇಂದ್ರದ ಬೆಂಬಲ ಬೆಲೆ ಸಿಗುವುದೇ ಇಲ್ಲ. ಕಟಾವಿಗೆ ಮುಂಚೆ ಖರೀದಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಮಾಡಿಕೊಂಡು ಕೇಂದ್ರಗಳು ಶುರು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತೊಗರಿ ಬೆಳೆ ಹೂವಾಡುವ ಹಂತದಲ್ಲೆ ಸರ್ಕಾರ ತೊಗರಿ ಬೆಳೆಗಾರರ ಹಿತ ರಕ್ಷಣೆಗೆ ಕ್ರಮ ಕೈಗೊಂಡು ತೊಗರಿ ಮಂಡಳಿಗೆ ಅಗತ್ಯ ಅನುದಾನ ನೀಡಿ ಮತ್ತು ಬೆಂಬಲ ಬೆಲೆ ಘೋಷಣೆ ಮಾಡಬೇಕು. ರಾಶಿ ಮಾಡಿದ ತಕ್ಷಣ ರೈತರು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಹೇಳಿದ್ದಾರೆ. ತೊಗರಿ ಬೆಳೆ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಭಾಗದ ತೊಗರಿ ಬೆಳೆಗಾರರ ಹಿತರಕ್ಷಣೆಗೆ ತೊಗರಿ ಮಂಡಳಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ರಾಜ್ಯ ಸರ್ಕಾರ ಮುಂದಾಲೋಚನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.