ಡಾ.ಡಿ.ಸಿ.ಪಾವಟೆ ವೇದಿಕೆ(ಧಾರವಾಡ): ಸಮ್ಮೇಳನದ ಪ್ರಧಾನ ವೇದಿಕೆ ಸೇರಿದಂತೆ ಇತರ ವೇದಿಕೆಗಳಲ್ಲಿ ಸಮ್ಮೇಳನಾಧ್ಯಕ್ಷರ ಭಾವಚಿತ್ರದ ಜತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರ ಭಾವಚಿತ್ರ ಇರುವುದಕ್ಕೆ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಆಕ್ಷೇಪ ವ್ಯಕ್ತಪಡಿಸಿದರು.
ಸಮಾನಾಂತರ ವೇದಿಕೆ–2ರಲ್ಲಿ ಭಾನುವಾರ ನಡೆದ ‘ಕಾವ್ಯಪ್ರಚಾರದ ವಿಭಿನ್ನ ನೆಲೆಗಳು’ ಗೋಷ್ಠಿಯಲ್ಲಿ ‘ಸುಗಮ ಸಂಗೀತ’ ವಿಷಯ ಕುರಿತು ಮಾತನಾಡಿದ ಅವರು, ‘ನಾನು 40 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದೇನೆ. ಪರಿಷತ್ನ ಯಾವ ಅಧ್ಯಕ್ಷರೂ, ಸಮ್ಮೇಳನಾಧ್ಯಕ್ಷರ ಜತೆಗೆ ತಮ್ಮ ಭಾವಚಿತ್ರವನ್ನು ಹಾಕಿಕೊಂಡಿದ್ದನ್ನು ನೋಡಿರಲಿಲ್ಲ. ಅಲ್ಲಿ ಅಧ್ಯಕ್ಷರ ಭಾವಚಿತ್ರ ಇರಬೇಕೇ ವಿನಾ ಇತರರದಲ್ಲ' ಎಂದು ನುಡಿದರು.
‘ಎರಡು ವರ್ಷಗಳಿಂದ ಕಸಾಪ ಸುಗಮ ಸಂಗೀತ ಪ್ರಕಾರಕ್ಕೆ ಪ್ರತ್ಯೇಕ ಗೋಷ್ಠಿ ನೀಡುತ್ತಿಲ್ಲ. ಸುಗಮ ಸಂಗೀತಕ್ಕೂ ಒಂದು ಗೋಷ್ಠಿಯ ಅವಕಾಶ ನೀಡಬೇಕಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.
‘ ಇದು ತಪ್ಪು. ಸಮ್ಮೇಳನದ ಅಧ್ಯಕ್ಷರ ಚಿತ್ರ ಮಾತ್ರ ಇರಬೇಕು. ಫೋಟೊ ಪ್ರದರ್ಶನ ಮಾಡಿಕೊಳ್ಳುವುದು ಪರಿಷತ್ತಿನ ಅಧ್ಯಕ್ಷರ ಲಕ್ಷಣವಲ್ಲ. ಇದನ್ನು ನಾನು ವಿರೋಧಿಸುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.