ಹುಬ್ಬಳ್ಳಿ: ಹೈದರಾಬಾದ್ ಕರ್ನಾಟಕವನ್ನು ‘ಕಲ್ಯಾಣ ಕರ್ನಾಟಕ’ ಎಂದು ರಾಜ್ಯ ಸರ್ಕಾರ ಹೆಸರು ಬದಲಾಯಿಸಿದೆ. ಆದರೆ, ಮುಂಬೈ ಕರ್ನಾಟಕವನ್ನು ‘ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡಬೇಕೆನ್ನುವ ಕೂಗಿಗೆ ಸ್ಪಂದಿಸದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಬೈ ಪ್ರೆಸಿಡೆನ್ಸಿ ವ್ಯಾಪ್ತಿಯಲ್ಲಿದ್ದ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡ ಪ್ರದೇಶವನ್ನು ‘ಮುಂಬೈ ಕರ್ನಾಟಕ’ ಎಂದು ಕರೆಯಲಾಗುತ್ತದೆ. ಸಂಶೋಧಕ ಎಂ. ಚಿದಾನಂದಮೂರ್ತಿ ಅವರು, ಹೈದರಾಬಾದ್ ಕರ್ನಾಟಕವನ್ನು ‘ಕಲ್ಯಾಣ ಕರ್ನಾಟಕ’ ಎಂದು, ಮುಂಬೈ ಕರ್ನಾಟಕವನ್ನು ‘ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡುವಂತೆ ಎರಡು ದಶಕಗಳಿಂದ ಆಗ್ರಹಿಸುತ್ತಲೇ ಬಂದಿದ್ದರು. ಇದಕ್ಕಾಗಿ ಕರಪತ್ರ ಚಳವಳಿ ಸೇರಿದಂತೆ ವಿವಿಧ ಬಗೆಯ ಹೋರಾಟಗಳನ್ನೂ ಮಾಡಿದ್ದರು.
ಇದನ್ನೂ ಓದಿ:‘ಹೈದರಾಬಾದ್ ಕರ್ನಾಟಕ’ ಈಗ ‘ಕಲ್ಯಾಣ ಕರ್ನಾಟಕ’
‘ಚಿದಾನಂದ ಮೂರ್ತಿ ಅವರ ಹೋರಾಟವನ್ನು ಬೆಂಬಲಿಸಿ ಬೆಳಗಾವಿಯಲ್ಲಿಯೂ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹೋರಾಟ ನಡೆಸಿದೆ. 50 ಸಾವಿರ ಕರಪತ್ರಗಳನ್ನು ಮುದ್ರಿಸಿ, ಈ ಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಹಂಚಿಕೆ ಮಾಡಲಾಗಿತ್ತು’ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.
‘ಹೆಸರು ಬದಲಾವಣೆಗೆ ಆಗ್ರಹಿಸಿ ನಡೆಸಿದ ಎರಡೂ ಕಡೆಯ ಹೋರಾಟಗಳು ಒಮ್ಮೆಗೇ ಆರಂಭಗೊಂಡಿದ್ದು. ಆದರೆ, ಅಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಇಲ್ಲಿ ಮಾಡಿಲ್ಲ. ಈ ಭಾಗವನ್ನು ಕಿತ್ತೂರು ಕರ್ನಾಟಕ ಮಾಡಬೇಕು ಎಂದು ಆಗ್ರಹಿಸಿ ಸಿ.ಎಂ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ’ ಎನ್ನುತ್ತಾರೆ ಅವರು.
***
"ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವನ್ನಾಗಿ ಕೂಡಲೇ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಶನಿವಾರ ಭೇಟಿಯಾಗಿ ಒತ್ತಾಯಿಸಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ."
-ಎಂ. ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.