ADVERTISEMENT

ಮುನಿರತ್ನ, ರಾಜೇಶ್‌ ಗೌಡ ಪ್ರಮಾಣ ವಚನ

ಮುಖ್ಯಮಂತ್ರಿ ಯಾವ ಖಾತೆ ಕೊಡುತ್ತಾರೊ ಅದನ್ನು ನಿಭಾಯಿಸುತ್ತೇನೆ: ಮುನಿರತ್ನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 9:27 IST
Last Updated 23 ನವೆಂಬರ್ 2020, 9:27 IST
ಮುನಿರತ್ನ ಮತ್ತು ರಾಜೇಶ್‌ ಗೌಡ
ಮುನಿರತ್ನ ಮತ್ತು ರಾಜೇಶ್‌ ಗೌಡ   

ಬೆಂಗಳೂರು: ವಿಧಾನಸಭೆಗೆ ಆರ್‌.ಆರ್‌. ನಗರ ಕ್ಷೇತ್ರದಿಂದ ಆಯ್ಕೆಯಾದ ಮುನಿರತ್ನ ಮತ್ತು ಶಿರಾದಿಂದ ಆಯ್ಕೆಯಾದ ರಾಜೇಶ್‌ ಗೌಡ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಇದ್ದರು

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆರ್‌.ಆರ್‌. ನಗರ ಕ್ಷೇತ್ರದಲ್ಲಿ 58 ಸಾವಿರ ಮತಗಳಿಂದ ಮುನಿರತ್ನ ಗೆಲುವು ಸಾಧಿಸಿದ್ದರೆ, ಶಿರಾ ಕ್ಷೇತ್ರದಲ್ಲಿ 13 ಸಾವಿರ‌ ಮತಗಳಿಂದ ರಾಜೇಶ್ ಗೌಡ ಜಯಭೇರಿ ಬಾರಿಸಿದ್ದರು.

ADVERTISEMENT

ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ: ‘ಸಚಿವ ಸ್ಥಾನ ನೀಡುವುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಮ್ಮ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೊ ಅದಕ್ಕೆ ಬದ್ಧವಾಗಿರುತ್ತೇನೆ. ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ’ ಎಂದು ಮುನಿರತ್ನ ಹೇಳಿದರು.

‘ಎಸ್‌ಬಿಎಂ (ಸೋಮಶೇಖರ್‌, ಬಸವರಾಜ್, ಮುನಿರತ್ನ) ಟೀಮ್‌ನಲ್ಲಿ ಯಾವುದೇ ರೀತಿ ಬಿರುಕು ಇಲ್ಲ. ಎಸ್.ಟಿ. ಸೋಮಶೇಖರ್ ನೀಡಿದ್ದ ಹೇಳಿಕೆಯನ್ನು ನಾನು ನೋಡಿಲ್ಲ (ಒಟ್ಟಿಗೆ ಇದ್ದರೆ ಮಂತ್ರಿ ಸ್ಥಾನ ಕೇಳಬಹುದು). ನಾವೆಲ್ಲಾ ಒಂದೇ ಎನ್ನುವ ಹೇಳಿಕೆ ಮಾತ್ರ ನೋಡಿದ್ದೇನೆ. ಮೂವರು ಒಟ್ಟಿಗೆ ರಾಜೀನಾಮೆ ಕೊಟ್ಟಿದ್ದೆವು. ಈಗಲೂ ಒಟ್ಟಿಗೆ ಇದ್ದೇವೆ. ಎಸ್‌ಬಿಎಂ ಲೋಗೊ ಒಂದೆ, ಅದು ಬಿಜೆಪಿ’ ಎಂದರು.

ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಸದ ಡಿ.ಕೆ. ಸುರೇಶ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುನಿರತ್ನ, ‘ಲೋಕಸಭಾ ಚುನಾವಣೆಯಲ್ಲಿ ಅವರು 2.5 ಲಕ್ಷ ಮತಗಳಿಂದ ಗೆದ್ದಾಗ ಇವಿಎಂ ಸಮಸ್ಯೆ ಆಗಲಿಲ್ಲ. ಈಗ ನಾನು ಗೆದ್ದಾಗ ಇವಿಎಂ ಮೇಲೆ ಸಂದೇಹ. ಅವರು ಗೆದ್ದಾಗ ಇದೇ ಅನುಮಾನ ಬಂದಿದ್ದರೆ ಒಪ್ಪಬಹುದಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.