ಚಿತ್ರದುರ್ಗ: ಲಾಕ್ಡೌನ್ ಘೋಷಣೆಯಾದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜಿಲ್ಲೆಯ ಹತ್ತು ಸಾವಿರ ಕುಟುಂಬಗಳಿಗೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಹಾರ ಧಾನ್ಯ ನೀಡಿ ನೆರವಾಗಿದ್ದಾರೆ.
ಪ್ರತಿ ಕುಟುಂಬಕ್ಕೆ ಹತ್ತು ಕೆ.ಜಿ. ಅಕ್ಕಿ, ರಾಗಿ, ಗೋಧಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು ಸೇರಿ ಇತರ ಆಹಾರ ಧಾನ್ಯ ನೀಡಲಾಗಿದೆ. ಏ.4ರಿಂದ ಮೇ 3ರವರೆಗೆ ನಿತ್ಯ ಸರಾಸರಿ 300ಕ್ಕೂ ಹೆಚ್ಚು ಬಡವರು ಸಹಾಯ ಪಡೆದಿದ್ದಾರೆ. 9,710 ಕಿಟ್ಗಳನ್ನು ವಿತರಣೆ ಮಾಡಲಾಗಿದೆ.
ಕಾರ್ಮಿಕರು, ನಿರಾಶ್ರಿತರು, ಸುಡುಗಾಡು ಸಿದ್ಧರು, ಅಲೆಮಾರಿ ಸಮುದಾಯ, ಹಕ್ಕಿಪಿಕ್ಕಿ ಜನಾಂಗ, ಜೋಗಿ ಸಮಾಜ, ನೇಕಾರರು, ಕಮ್ಮಾರರು, ವಾಹನ ಚಾಲಕರು, ಪತ್ರಿಕಾ ವಿತರಕರು ಸೇರಿ ಹಲವು ಸಮುದಾಯಕ್ಕೆ ಮುರುಘಾ ಮಠ ನೆರವು ನೀಡಿದೆ. ಹಮಾಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು, ಮಂಗಳಮುಖಿಯರು ಇದರ ಪ್ರಯೋಜನ ಪಡೆದಿದ್ದಾರೆ. ಸಂಕಷ್ಟದಲ್ಲಿದ್ದ ಗರ್ಭಿಣಿಯರಿಗೂ ಮಠ ನೆರವು ನೀಡಿದ್ದು ವಿಶೇಷ.
‘ಕೊರೊನಾ ಸೋಂಕು ಅಸಾಯಕತೆ ಸೃಷ್ಟಿಸಿದೆ. ಮಂದಿರ, ಮಸೀದಿ ಹಾಗೂ ಚರ್ಚುಗಳು ಬಾಗಿಲು ಮುಚ್ಚುವ ದಯನೀಯ ಸ್ಥಿತಿ ಬಂದೊದಗಿದೆ. ಇಂತಹ ಸಂಕಷ್ಟದಲ್ಲಿ ಮುರುಘಾ ಮಠ ಮಾನವೀಯತೆಯ ಬಾಗಿಲು ತೆರೆಯಿತು. ನಿಸರ್ಗದತ್ತ ಸಂಕಷ್ಟಗಳು ಎದುರಾದಾಗ ಹೇಗೆ ಸ್ಪಂದಿಸುತ್ತೇವೆ ಎಂಬುದು ಮುಖ್ಯ’ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.