ADVERTISEMENT

ನಾಡಗೀತೆ ದಾಟಿ ಅನುಷ್ಠಾನಕ್ಕೆ ಸುಗಮ ಸಂಗೀತ ಸಮ್ಮೇಳನದಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 18:23 IST
Last Updated 13 ಜನವರಿ 2019, 18:23 IST

ಚಿತ್ರದುರ್ಗ: ನಾಡಗೀತೆಯನ್ನು 2 ನಿಮಿಷ 20 ಸೆಕೆಂಡುಗಳಲ್ಲಿ ಹಾಡಬಹುದಾದ ದಾಟಿಯನ್ನು ಗುರುತಿಸಿದ ಡಾ. ಚನ್ನವೀರ ಕಣವಿ ನೇತೃತ್ವದ ಸಮಿತಿಯ ಶಿಫಾರಸನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ರಾಜ್ಯ ಮಟ್ಟದ 16ನೇ ಸುಗಮ ಸಂಗೀತ ಸಮ್ಮೇಳನ ನಿರ್ಣಯ ಕೈಗೊಂಡಿತು.

ಎರಡು ದಿನ ನಡೆದ ಸಮ್ಮೇಳನದ ನಿರ್ಣಯಗಳನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್‌ ಗೌರವ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹಾಗೂ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಭಾನುವಾರ ಮಂಡಿಸಿದರು. ಸಮ್ಮೇಳನದಲ್ಲಿ ಭಾಗವಹಿಸಿದ್ದ ಕವಿಗಳು, ಗಾಯಕರು ಹಾಗೂ ಸಂಗೀತ ಆಸಕ್ತರು ಇದಕ್ಕೆ ಒಪ್ಪಿಗೆ ಸೂಚಿಸಿದರು.

ಕುವೆಂಪು ರಚಿಸಿದ ನಾಡಗೀತೆಗೆ ನಿರ್ದಿಷ್ಟ ದಾಟಿ ಗುರುತಿಸುವಂತೆ ಒಂದೂವರೆ ದಶಕದಿಂದ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ. 5 ರಿಂದ 6 ನಿಮಿಷ ಕಾಲಾವಕಾಶ ತೆಗೆದುಕೊಳ್ಳುವ ನಾಡಗೀತೆಗೆ ವೃದ್ಧರು, ಗರ್ಭಿಣಿಯರು ಎದ್ದು ನಿಂತು ಗೌರವ ಸೂಚಿಸಲು ಸಾಧ್ಯವಾಗುತ್ತಿಲ್ಲ. ಇದರ ಕಾಲಾವಧಿಯನ್ನು ಕಡಿಮೆ ಮಾಡುವಂತೆ 2013ರಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂಬ ಅಸಮಾಧಾನವನ್ನು ಸಮ್ಮೇಳನ ವ್ಯಕ್ತಪಡಿಸಿತು.

ADVERTISEMENT

ಡಾ. ಜಿ.ಎಸ್‌. ಶಿವರುದ್ರಪ್ಪ ಅವರ ಬಳಿಕ ಮತ್ತೊಬ್ಬರಿಗೆ ರಾಷ್ಟ್ರಕವಿ ಮಾನ್ಯತೆ ಸಿಕ್ಕಿಲ್ಲ. ಚನ್ನವೀರ ಕಣವಿ, ಕೆ.ಎಸ್‌. ನಿಸಾರ್‌ ಅಹಮ್ಮದ್‌, ಡಾ. ಚಂದ್ರಶೇಖರ ಕಂಬಾರ ಸೇರಿ ಅನೇಕರು ಅರ್ಹತೆ ಹೊಂದಿದ್ದಾರೆ. ಇಂತಹ ಅರ್ಹರನ್ನು ಆಯ್ಕೆ ಮಾಡಬೇಕು.

ಸುಗಮ ಸಂಗೀತವನ್ನು ಶಾಲೆ–ಕಾಲೇಜು ಪಠ್ಯವನ್ನಾಗಿ ಅಳವಡಿಸಬೇಕು. ಸುಗಮ ಸಂಗೀತ ಭವನ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಜಾಗ ಒದಗಿಸಬೇಕು. ಸಂಗೀತ ಸಮ್ಮೇಳನಕ್ಕೆ ಪ್ರತಿ ವರ್ಷ ₹ 1 ಕೋಟಿ ಅನುದಾನ ಮೀಸಲಿಡಬೇಕು ಎಂಬ ನಿರ್ಣಯಗಳನ್ನೂ ಸಮ್ಮೇಳನ ಕೈಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.