ADVERTISEMENT

ಭಾವೈಕ್ಯತೆ ಮೆರೆದ ಮುಸ್ಲಿಂ ದರ್ಗಾ ಸಮಿತಿ

ಶಿವಲಿಂಗ ಶ್ರೀಗಳ ಸ್ಮರಣೋತ್ಸವದಲ್ಲಿ ಹಾಲು ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 3:47 IST
Last Updated 14 ಡಿಸೆಂಬರ್ 2020, 3:47 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾದ ಶಿವಲಿಂಗ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಮುಸ್ಲಿಂ ದರ್ಗಾ ಸಮಿತಿಯಿಂದ ಭಕ್ತರಿಗೆ ಹಾಲು ವಿತರಣೆ ಮಾಡಲಾಯಿತು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾದ ಶಿವಲಿಂಗ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಮುಸ್ಲಿಂ ದರ್ಗಾ ಸಮಿತಿಯಿಂದ ಭಕ್ತರಿಗೆ ಹಾಲು ವಿತರಣೆ ಮಾಡಲಾಯಿತು   

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಾದ ಶಿವಲಿಂಗ ಮಹಾಸ್ವಾಮೀಜಿ ಅವರ 12ನೇ ಸ್ಮರಣೋತ್ಸವದಲ್ಲಿ ಭಾನುವಾರ ಗ್ರಾಮದ ಮುಸ್ಲಿಂ ದರ್ಗಾ ಸಮಿತಿ ಮುಖಂಡರು ಭಕ್ತರಿಗೆ ಬಾದಾಮಿ ಹಾಲು ವಿತರಿಸುವ ಮೂಲಕ ಭಾವೈಕ್ಯತೆ ಮೆರೆದರು.

ಮಾದನ ಹಿಪ್ಪರಗಾದಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಧರ್ಮಿಯರ ಕುಟುಂಬಗಳಿವೆ. ಹಿಂದಿನಿಂದಲೂ ಇವರು ಶಿವಲಿಂಗ ಶ್ರೀಗಳ ಪ್ರತಿ ಸ್ಮರಣೋತ್ಸವದಲ್ಲಿ ಪಾಲ್ಗೋಳ್ಳುವುದು ವಿಶೇಷ. ಬಸ್‌ ನಿಲ್ದಾಣದ ಮುಂದೆ ವಿವಿಧ ಗ್ರಾಮದಿಂದ ಆಗಮಿಸುವ ಪ್ರಯಾಣಿಕರಿಗೂ ಹಾಗೂ ಗ್ರಾಮದ ಭಕ್ತರಿಗಾಗಿ ಬೆಳಗ್ಗೆಯಿಂದ ಸಿಹಿ ಹಾಲು ವಿತರಿಸುವ ಕಾರ್ಯದಲ್ಲಿ ಮುಸ್ಲಿಂ ಮುಖಂಡರ ಶ್ರದ್ಧೆ ಭಕ್ತಿ ಎದ್ದು ಕಾಣುತ್ತಿತು.

ಪೀಠಾಧಿಪಾತಿ ಅಭಿನವ ಶಿವಲಿಂಗ ಸ್ವಾಮೀಜಿ, ಹಿರೇಮಠದ ಶಾಂತಲಿಂಗ ಸ್ವಾಮೀಜಿ ಸ್ಥಳಕ್ಕೆ ಆಗಮಿಸಿ ಬಾದಾಮಿ ಹಾಲು ಸವಿದರು. ದರ್ಗಾ ಸಮಿತಿಯಿಂದ ಇಬ್ಬರು ಸ್ವಾಮೀಜಿಗಳಿಗೆ ಸತ್ಕರಿಸಲಾಯಿತು. ರೈತ ಹೋರಾಟಗಾರ ದಯಾನಂದ ಪಾಟೀಲ, ದರ್ಗಾ ಸಮಿತಿ ಪ್ರಮುಖರಾದ ರಹಿಮಾನ ಡಾಂಗೆ, ಮಹಿಬೂಬ ಭಾಗವಾನ್, ಮಜೀಬ್ ಫಣಿಬಂಧ, ಮೈನೋದ್ದಿನ್ ಖೂರೇಸಿ, ಮಹಿಬೂಬ ಫಣಿಬಂಧ, ಸಿದ್ದರಾಮ ಅರಳಿಮರ ಇತರರು ಇದ್ದರು.

ADVERTISEMENT

ಉತ್ತಮ ರಾಸುಗಳಿಗೆ ಸನ್ಮಾನ

ಶಿವಲಿಂಗ ಸ್ವಾಮೀಜಿಗಳ 12ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಶುಕ್ರವಾರ ಜಾನುವಾರು ಸಂತೆ ಹಾಗೂ ಉತ್ತಮ ರಾಸುಗಳುಳ್ಳ ರೈತರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಪಶು ಸಂಗೋಪನಾ ಇಲಾಖೆ ಜಿಲ್ಲಾ ನಿರ್ದೇಶಕ ಡಾಯಲ್ಲಪ್ಪ ಇಂಗಳೆ, ತಾಲ್ಲೂಕಾಧಿಕಾರಿ ಡಾ.ಸಂಜಯ ರೆಡ್ಡಿ ಮಾತನಾಡಿ, ‘ಹೈನುಗಾರಿಕೆ ಹೆಚ್ಚು ಲಾಭದಾಯಕವಾಗಿದೆ. ಪ್ರತಿಯೊಬ್ಬ ರೈತರು, ಕೂಲಿಕಾರ್ಮಿಕರು ಸಹ ಮನೆಗೊಂದು ಆಕಳು, ಎಮ್ಮೆ ಪಾಲನೆ ಮಾಡಬೇಕು’ ಎಂದು ತಿಳಿಸಿದರು.

ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಡಾ.ಮಹಾಂತೇಶ ಪಾಟೀಲ, ಡಾ.ಕೇದಾರನಾಥ, ಶಾಂತಕುಮಾರ ಹಿರೇಮಠ, ಗುಂಡು ಆಳಂದ ಇದ್ದರು. ಉತ್ತಮ ರಾಸುಗಳಿಗೆ ಬಹುಮಾನ ನೀಡಿ ರೈತರಿಗೆ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.