ಬೆಂಗಳೂರು: ಮುಜರಾಯಿ ಇಲಾಖೆಗೆ ಹಿಂದೂಯೇತರ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ಇತ್ಯರ್ಥಪಡಿಸಿದೆ.
ವಕೀಲ ಎನ್.ಪಿ. ಅಮೃತೇಶ್ ಮತ್ತು ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆ ಸೆಕ್ಷನ್ 7ರ ಪ್ರಕಾರ ಮುಜರಾಯಿ ಇಲಾಖೆಯಲ್ಲಿನ ಕಾರ್ಯಭಾರಗಳ ನಿರ್ವಹಣೆಗೆ ಹಿಂದೂಯೇತರ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡುವಂತಿಲ್ಲ. ಆದರೆ, ಹಿಂದೂಯೇತರರನ್ನು ನೇಮಕ ಮಾಡಲಾಗಿದ್ದು, ಅವರನ್ನು ಬೇರೊಂದು ಇಲಾಖೆಗೆ ವರ್ಗಾಯಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
‘ಸೆಕ್ಷನ್ 7ರ ಪ್ರಕಾರ ಧಾರ್ಮಿಕ ಕಾರ್ಯಭಾರಗಳ ನಿರ್ವಹಣೆಗೆ ಹಿಂದೂಯೇತರರ ನೇಮಕ ಮಾಡುವಂತಿಲ್ಲ. ಆದರೆ, ಇಲಾಖೆಯ ಕಚೇರಿ ಕಾರ್ಯಭಾರಗಳಿಗೆ ಹಿಂದೂಯೇತರರನ್ನು ನೇಮಕ ಮಾಡಲು ನಿರ್ಬಂಧ ಇಲ್ಲ’ ಎಂದು ಪೀಠ ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.