ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ತಾವು ಮತ್ತೆ ಸ್ಪರ್ಧಿಸಲು ಯೋಚಿಸುತ್ತಿರುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಇಲ್ಲಿ ಹೇಳಿದರು.
ಸಂಜೆ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ‘ಗ್ರಾಮ ಜನಾಧಿ ಕಾರ ಸನ್ಮಾನ’ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಳೆದ ಚುನಾ ವಣೆಯೇ ನನ್ನ ಕೊನೆಯ ಚುನಾವಣೆ ಎಂದು ಹೇಳಿ, ಇಲ್ಲಿ ಸ್ಪರ್ಧಿಸಿದ್ದೆ. ಗೆದ್ದಿದ್ದರೆ ಮತ್ತೆ ಸ್ಪರ್ಧಿಸುತ್ತಿರಲಿಲ್ಲ. ಇಲ್ಲಿ ಸೋತ ಕಾರಣ, ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕೇ ಎಂದು ಆಲೋಚನೆ ಮಾಡುತ್ತಿದ್ದೇನೆ’ ಎಂದರು.
ಮತ್ತೆ ನಾವೇ ಅಧಿಕಾರಕ್ಕೆ: ಇದಕ್ಕೂ ಮುನ್ನ ವರುಣಾ ವಿಧಾನಸಭಾ ಕ್ಷೇತ್ರ ದಲ್ಲಿ, ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಅಭಿನಂದಿಸಿ ಮಾತನಾಡಿದ ಸಿದ್ದರಾಮಯ್ಯ, ‘ಯಡಿಯೂರಪ್ಪ, ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆದವರಲ್ಲ. 17 ಶಾಸಕರನ್ನು ವ್ಯಾಪಾರ ಮಾಡಿಕೊಂಡು ಸಿಎಂ ಆದವರು. ತಿಪ್ಪರಲಾಗ ಹಾಕಿದರೂ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬರಲ್ಲ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ’ ಎಂದರು.
‘ಮಾನ–ಮರ್ಯಾದೆ ಇಲ್ಲದವರು ಅಧಿಕಾರ ಹಾಗೂ ದುಡ್ಡಿಗಾಗಿ ಪಕ್ಷ ಬಿಟ್ಟು ಹೋದರು. ನಾವು ಮತ್ತೆ ಅಧಿಕಾರಕ್ಕೆ ಬರಲಿದ್ದು, ನೀವು ಮಾತ್ರ ಬಿಜೆಪಿಯ ಆಮಿಷಕ್ಕೆ ಬಲಿಯಾಗಬೇಡಿ’ ಎಂದು ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ಮನವಿ ಮಾಡಿದರು.
ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಕಿಡಿಕಾರಿದ ಅವರು, ಅಧಿಕಾರ ನಿಭಾಯಿಸಲಾಗದಿದ್ದಲ್ಲಿ ಕೆಳಗಿಳಿಯುವಂತೆ ವಾಗ್ದಾಳಿ ನಡೆಸಿದರು.
‘ಗಾಂಧಿ ಹೆಸರು ಹೇಳುವ ನೈತಿಕತೆ ಇದೆಯೇ?’
ಮೈಸೂರು: ‘ಬಿಜೆಪಿಗರಿಗೆ ಮಹಾತ್ಮಗಾಂಧಿ, ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯಾ?’ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಕಿಡಿಕಾರಿದರು.
‘ಕಾಂಗ್ರೆಸ್ಗೆ ಗಾಂಧಿ, ಅಂಬೇಡ್ಕರ್ ಶಾಪವಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿ ಕೆಗೆ ತಿರುಗೇಟು ನೀಡಿದ ಅವರು, ‘ಗಾಂಧಿ ಕೊಂದ ಗೋಡ್ಸೆ ಫೋಟೊ ವನ್ನಿಟ್ಟು ಪೂಜಿಸುವವರಿಗೆ ಮಹಾತ್ಮನ ಹೆಸರು ಹೇಳುವ ನೈತಿಕತೆಯಿದೆಯೇ? ಬಿಜೆಪಿಯವರು ರಾಮರಾಜ್ಯದವರಲ್ಲ. ರಾವಣ ರಾಜ್ಯದವರು’ ಎಂದು ಅವರು ಹರಿಹಾಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.