ಮೈಸೂರು: ಮೈಸೂರಿಗರಿಗೆ ಮತ್ತೊಂದು ಸಿಹಿ ಸುದ್ದಿ. ಈಚೆಗಷ್ಟೇ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಮೈಸೂರಿಗೆ ವಿಸ್ತರಣೆಗೊಂಡಿದ್ದ ಬೆನ್ನಿನಲ್ಲೇ, ಕಾಚೇಗುಡ – ಬೆಂಗಳೂರು ಎಕ್ಸ್ಪ್ರೆಸ್ (12785/86) ರೈಲು ಮೈಸೂರಿನವರೆಗೂ ವಿಸ್ತರಣೆಗೊಂಡಿದೆ.
18 ವರ್ಷಗಳಿಂದ ಈ ರೈಲು ಕಾಚೇಗುಡ – ಬೆಂಗಳೂರು ನಡುವೆ ಸಂಚರಿಸುತ್ತಿದೆ. ಈ ರೈಲನ್ನು ಮೈಸೂರಿಗೆ ನೀಡುವಂತೆ ಅಷ್ಟು ವರ್ಷಗಳಿಂದಲೂ ಪ್ರಯಾಣಿಕರು ಕೋರುತ್ತಿದ್ದರು. ಆ ಮನವಿಗೆ ಈಗ ಹಸಿರುನಿಶಾನೆ ಸಿಕ್ಕಿದೆ. ಇದರಿಂದ ಹೈದರಾಬಾದಿಗೆ ತೆರಳಲು ಬಸ್ಸನ್ನೇ ಆಶ್ರಯಿಸಿದ್ದ ಮೈಸೂರಿನ ಪ್ರಯಾಣಿಕರು ಸಂತಸ ಪಡುವಂತಾಗಿದೆ.
ಅಶೋಕಪುರಂವರೆಗೂ ವಿಸ್ತರಣೆ: ಮೈಸೂರಿನ ಅಶೋಕಪುರಂ ರೈಲು ನಿಲ್ದಾಣಕ್ಕೂ ಇದರಿಂದ ಮತ್ತೊಂದು ರೈಲು ಸಿಕ್ಕಂತಾಗಿರುವುದು ವಿಶೇಷ. ಇಲ್ಲಿಂದ ಹೊರಡುವ ವಿಶ್ವಮಾನವ ಎಕ್ಸ್ಪ್ರೆಸ್ ರೈಲು ಬೆಂಗಳೂರು ಮೂಲಕ ಹುಬ್ಬಳ್ಳಿಗೆ ಹೋಗಿ, ವಾಪಸಾಗುತ್ತಿತ್ತು. ಇದೀಗ ಇಲ್ಲಿಂದ ಹೈದರಾಬಾದಿಗೂ ಸಂಚರಿಸುವ ಅವಕಾಶ ಸಿಕ್ಕಿದೆ. ಕಾಚೇಗುಡ ಎಕ್ಸ್ಪ್ರೆಸ್ ಅಶೋಕಪುರಂ ರೈಲು ನಿಲ್ದಾಣದಿಂದ ಮಧ್ಯಾಹ್ನ 2.05ಕ್ಕೆ ಹೊರಡಲಿದೆ. ಮೈಸೂರು ನಿಲ್ದಾಣದಿಂದ 2.45ಕ್ಕೆ ಹೊರಟು, ಸಂಜೆ 5.45ಕ್ಕೆ ಬೆಂಗಳೂರು ಸೇರಲಿದೆ. ಬೆಳಗಿನ ಜಾವ 5.40ಕ್ಕೆ ಹೈದರಾಬಾದ್ ಸೇರಲಿದೆ.
ಹೈದರಾಬಾದಿನಿಂದ ರಾತ್ರಿ 7.05ಕ್ಕೆ ಹೊರಟು, ಬೆಳಿಗ್ಗೆ 6.25ಕ್ಕೆ ಬೆಂಗಳೂರು ಸೇರಲಿದೆ. ಮೈಸೂರು ನಿಲ್ದಾಣಕ್ಕೆ ಬೆಳಿಗ್ಗೆ 9.40ಕ್ಕೆ ಸೇರಲಿದ್ದು, ಬೆಳಿಗ್ಗೆ 10.05ಕ್ಕೆ ಅಶೋಕಪುರಂ ನಿಲ್ದಾಣ ತಲುಪಲಿದೆ.
ಹಗಲಿನಲ್ಲಿ ರೈಲು: ಅಶೋಕಪುರಂ ನಿಲ್ದಾಣದಿಂದ ಹಾಲಿ ಸಂಚರಿಸುತ್ತಿರುವ ವಿಶ್ವಮಾನವ ಎಕ್ಸ್ಪ್ರೆಸ್ ರೈಲು ಕತ್ತಲಿನಲ್ಲೇ ಸಂಚರಿಸುತ್ತಿದೆ. ಅಶೋಕಪುರಂ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ದೀಪದ ವ್ಯವಸ್ಥೆ ಇರದಿದ್ದ ಕಾರಣ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಹೊಸ ರೈಲು ಹಗಲಿನ ವೇಳೆ ಸಂಚರಿಸುವ ಕಾರಣ, ಪ್ರಯಾಣಿಕರು ಕೊಂಚ ನಿರಾಳರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.