ADVERTISEMENT

ನಳಿನ್‌ರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ?

ಸಪ್ಪೆ ಮುಖದೊಂದಿಗೆ ಮನೆಯಿಂದ ನಿರ್ಗಮಿಸಿದ ನಳಿನ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 5:49 IST
Last Updated 3 ಅಕ್ಟೋಬರ್ 2019, 5:49 IST
ಬಿ.ಎಸ್.ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್
ಬಿ.ಎಸ್.ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್   

ಬೆಂಗಳೂರು:ತಮ್ಮನ್ನು ಕಡೆಗಣಿಸುತ್ತಿರುವ ವಿಚಾರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಉಭಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿಗಳ ಬೆನ್ನಲ್ಲೇ ನಳಿನ್ ಕುಮಾರ್ ಅವರು ಗುರುವಾರ ಬೆಳಿಗ್ಗೆ ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯಲ್ಲಿರುವ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರನ್ನು ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಉಭಯ ನಾಯಕರು ಸುಮಾರು 40 ನಿಮಿಷ ಮಾತುಕತೆ ನಡೆಸಿದ್ದಾರೆ. ಪೂರ್ವ ನಿಗದಿಯಂತೆ ಈ ಮಾತುಕತೆ ಬಳಿಕ ನಳಿನ್ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ಯಡಿಯೂರಪ್ಪ ನಿವಾಸದಿಂದ ಹೊರ ಬಂದ ನಳಿನ್ಸಪ್ಪೆ ಮುಖದೊಂದಿಗೆ, ಪತ್ರಕರ್ತರ ಬಳಿ ಮಾತನಾಡದೆ ನಿರ್ಗಮಿಸಿದರು.

ನೆರೆ ಪರಿಹಾರ ಸೇರಿ ಹಲವು ವಿಷಯ ಚರ್ಚೆ:ಮಾತುಕತೆ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಕೇಂದ್ರದಿಂದ ನೆರೆ ಪರಿಹಾರ ತರುವುದೂ ಸೇರಿ ಹಲವು ವಿಷಯಗಳ ಬಗ್ಗೆ ನಳಿನ್ ಜತೆ ಚರ್ಚೆ ನಡೆಸಲಾಯಿತು ಎಂದರು.ಪಕ್ಷದ ಯಾವ ನಾಯಕರನ್ನೂ ಕೈಬಿಡುವ ಪ್ರಶ್ನೆ ಇಲ್ಲ.ಪಕ್ಷವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಪ್ರಧಾನಿ ದೂಷಣೆ ಬೇಡ:ನೆರೆ ಪರಿಹಾರ ನೀಡಿಲ್ಲ ಎಂದು ಪ್ರಧಾನಿ ಅವರನ್ನು ದೂಷಿಸುವ ಅಗತ್ಯ ಇಲ್ಲ. ಕೇಂದ್ರದ ನೆರವು ವಿಳಂಬವಾಗಿದ್ದರೂ ನೆರೆ ಪರಿಹಾರವನ್ನು ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಸರ್ಕಾರ ಈಗಾಗಲೇ ಹಲವು ರೀತಿಯಲ್ಲಿ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿದೆ. ಕೇಂದ್ರಕ್ಕೆ ನೆರೆ ಪರಿಸ್ಥಿತಿಯ ಸಂಪೂರ್ಣ ಅರಿವಿದೆ. ಮತ್ತೆ ಅದಕ್ಕಾಗಿ ಪ್ರಧಾನಿ ಅವರನ್ನು ಭೇಟಿ ನಾಡುವ ಅಗತ್ಯ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.