ADVERTISEMENT

ನಂದಿಗಿರಿಧಾಮ: ವಾರಾಂತ್ಯದಲ್ಲಿ ಪ್ರವೇಶಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 13:42 IST
Last Updated 24 ಮಾರ್ಚ್ 2022, 13:42 IST
ನಂದಿ ಗಿರಿಧಾಮ
ನಂದಿ ಗಿರಿಧಾಮ   

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿದ್ದ ವಾರಾಂತ್ಯದ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ. ಶನಿವಾರ ಮತ್ತು ಭಾನುವಾರ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ. ಮಾ.26ರಿಂದ ಈ ಆದೇಶ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಂದಿ ಗಿರಿಧಾಮದ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಕಾರಣದಿಂದ ವಾರಾಂತ್ಯದ ದಿನಗಳಲ್ಲಿ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಂದಿ ಬೆಟ್ಟ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ವಾರಾಂತ್ಯದ ದಿನದಿಂದಲೇ ಪ್ರವೇಶ ಪತ್ರ ಪಡೆದ ಪ್ರವಾಸಿಗರಿಗೆ ನಂದಿ ಗಿರಿಧಾಮ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ ಎಂದರು.

ADVERTISEMENT

ಶನಿವಾರ ಪ್ರವಾಸಕ್ಕೆ ಬರುವವರು ಶುಕ್ರವಾರ ಸಂಜೆ 6ರ ಒಳಗೆ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯಬೇಕು. ಭಾನುವಾರ ಪ್ರವಾಸಕ್ಕೆ ಬರುವವರು ಶನಿವಾರ ಸಂಜೆ 6ರ ಒಳಗೆ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯಬೇಕು. ಆನ್‌ನಲ್ಲಿ ಪ್ರವೇಶ ಪತ್ರ ದೊರೆಯದವರು ನಂದಿಬೆಟ್ಟದ ಪ್ರವೇಶ ದ್ವಾರದ ಬಳಿ ಸಕ್ಷಮ ಪ್ರಾಧಿಕಾರ ತೆರೆದಿರುವ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿ ಪ್ರವಾಸ ಕೈಗೊಳ್ಳಬಹುದು ಎಂದು ಹೇಳಿದರು.

ನಿತ್ಯ 2,500 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಶೇ 50ರಷ್ಟು ಟಿಕೆಟ್‌ಗಳನ್ನು ಆನ್‌ಲೈನ್ ಮತ್ತು ಶೇ 50ರಷ್ಟು ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಆನ್‌ಲೈನ್ ಟಿಕೆಟ್ ಕಾಯ್ದಿರಿಸಲು www.kstdc.co ಸಂಪರ್ಕಿಸಬಹುದು. ಟಿಕೆಟ್ ಸಿಗದವರಿಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಗಿರಿಧಾಮದ ಮೇಲೆ 1000 ದ್ವಿಚಕ್ರ ವಾಹನಗಳು ಹಾಗೂ ಕಾರು, ಮಿನಿ ಬಸ್‌ ಸೇರಿದಂತೆ 300 ನಾಲ್ಕು ಚಕ್ರದ ವಾಹನಗಳ ನಿಲುಗಡೆ ಸ್ಥಳಾವಕಾಶವಿದೆ. ಅಷ್ಟು ವಾಹನಗಳಿಗೆ ಮಾತ್ರ ಗಿರಿಧಾಮದ ಮೇಲ್ಭಾಗಕ್ಕೆ ಅನುಮತಿ ನೀಡಲಾಗುವುದು. ಮೇಲ್ಭಾಗಕ್ಕೆ ತೆರಳಿದ ವಾಹನಗಳು ನಿರ್ಗಮಿಸಿದಂತೆ ಇತರ ಪ್ರವಾಸಿಗರ ವಾಹನಗಳಿಗೆ ಟಿಕೆಟ್‌ಗಳನ್ನು ವಿತರಿಸಿ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.