ಬೆಂಗಳೂರು: ಎಮ್ಮೆ ಹಾಲು ಒಳಗೊಂಡಂತೆ ನಂದಿನಿ ಬ್ರ್ಯಾಂಡ್ನ ನೂತನ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಶಿವರಾಜ್ಕುಮಾರ್ ಅವರು ಗುರುವಾರ ಬಿಡುಗಡೆ ಮಾಡಿದರು.
ಎಲ್ಲ ವರ್ಗದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಲು, ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ‘ನಂದಿನಿ ಎಮ್ಮೆ ಹಾಲು’, ಕಡಿಮೆ ಕೊಬ್ಬಿನಾಂಶ ಒಳಗೊಂಡ ‘ಮೊಸರು ಲೈಟ್’ ಹಾಗೂ ಆಕರ್ಷಕ ವಿನ್ಯಾಸದ ಹೊಸ ಪ್ಯಾಕಿಂಗ್ನ ಮೈಸೂರ್ ಪಾಕ್, ಏಲಕ್ಕಿ ಪೇಡಾ, ಸಿರಿಧಾನ್ಯದ ಲಡ್ಡು, ಧಾರವಾಡ ಪೇಡ, ಹಾಲಿನ ಪೇಡ ಸೇರಿದಂತೆ 40ಕ್ಕೂ ಹೆಚ್ಚು ಬಗೆಯ ಸಿಹಿ ತಿನಿಸುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
500 ಮಿ.ಲೀನ ನಂದಿನಿ ಎಮ್ಮೆ ಹಾಲಿಗೆ ₹35, ಮೊಸರು ಲೈಟ್ಗೆ ₹25 ನಿಗದಿ ಮಾಡಲಾಗಿದೆ.
ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದ ಪುನೀತ್ ಮರಣಾನಂತರ ಅವರ ಹಿರಿಯ ಸಹೋದರ ಶಿವರಾಜ್ಕುಮಾರ್ ಅವರು ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಸಮ್ಮತಿಸಿದ್ದು, ಇದೇ ಮೊದಲ ಬಾರಿ ಅವರು ಪಾಲ್ಗೊಂಡ ನಂದಿನಿ ಉತ್ಪನ್ನಗಳ ಪ್ರಚಾರದ ಟಿವಿ ಜಾಹೀರಾತಿನ ಟೀಜರ್ ಹಾಗೂ ಕೆಎಂಎಫ್ ಸಹಭಾಗಿತ್ವದ ‘ಪ್ರಜಾವಾಣಿ’ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್, ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್, ‘ಪ್ರಜಾವಾಣಿ’ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಕಿರಣ್ ಸುಂದರರಾಜನ್ ಉಪಸ್ಥಿತರಿದ್ದರು.
ಅಪ್ಪ ಹಾಗೂ ಪುನೀತ್ ರಾಜ್ಯದ ರೈತರಿಗೆ ನೆರವಾಗಲು ನಂದಿನಿ ಉತ್ಪನ್ನಗಳ ಪರ ಉಚಿತ ಪ್ರಚಾರ ನಡೆಸಿದ್ದರು. ನಾನು ಸಹ ಯಾವುದೇ ಸಂಭಾವನೆ ಪಡೆಯದೆ ರಾಯಭಾರ ನಿಭಾಯಿಸುವೆಶಿವರಾಜ್ಕುಮಾರ್ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.