ADVERTISEMENT

ಕಬಿನಿ ನದಿ ಮಾಲಿನ್ಯ: ರೆಸಾರ್ಟ್‌ ಮಾಲೀಕರಿಗೆ ಎನ್‌ಜಿಟಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 3 ಮೇ 2023, 15:40 IST
Last Updated 3 ಮೇ 2023, 15:40 IST
NGT
NGT   

ನವದೆಹಲಿ: ಕರ್ನಾಟಕದ ಕಬಿನಿ ನದಿಗೆ ಸಂಸ್ಕರಿಸದ ಕೊಳಚೆ ನೀರನ್ನು ಬಿಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ‘ಡಿಸ್ಕವರಿ ವಿಲೇಜ್‌’ ರೆಸಾರ್ಟ್ ಮಾಲೀಕರು ಹಾಗೂ ಇತರ ಪ್ರತಿವಾದಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೋಟಿಸ್‌ ನೀಡಿದೆ. 

ನದಿ ಮಾಲಿನ್ಯ ಮಾಡುತ್ತಿರುವ ರೆಸಾರ್ಟ್‌ ಮುಚ್ಚಲು ಆದೇಶ ಹೊರಡಿಸಬೇಕು ಎಂದು ಕೋರಿ ದಿನೇಶ್‌ ಕಲ್ಲಹಳ್ಳಿ ಎಂಬುವರು ಎನ್‌ಜಿಟಿ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿಗಳಾದ ಪುಷ್ಪಾ ಅಮರನಾಥ್‌ ಹಾಗೂ ಸತ್ಯಗೋಪಾಲ್‌ ಕೊರ್ಲ‍ಪಾಟಿ ಅವರನ್ನು ಒಳಗೊಂಡ ಪೀಠ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿ, ನೋಟಿಸ್‌ಗೆ ಉತ್ತರ ನೀಡಲು ಪ್ರತಿವಾದಿಗಳಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿತು. ಬಳಿಕ ಪ್ರಕರಣದ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು. 

ಜಲ ಕಾಯ್ದೆ ಕಾಯ್ದೆ 1974 ಹಾಗೂ ವಾಯು ಕಾಯ್ದೆ 1981ರ ಅಡಿಯಲ್ಲಿ ರೆಸಾರ್ಟ್‌ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2022ರ ಡಿಸೆಂಬರ್ 31ರಂದು ಆದೇಶ ಹೊರಡಿಸಿದೆ. ಆದರೆ, ಆದೇಶ ಇಲ್ಲಿಯವರೆಗೆ ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ಲಭ್ಯ ದಾಖಲೆಗಳಿಂದ ಗೊತ್ತಾಗಿದೆ ಎಂದು ಪೀಠ ಹೇಳಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.