ADVERTISEMENT

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 16:09 IST
Last Updated 5 ಡಿಸೆಂಬರ್ 2025, 16:09 IST
   

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಭಾಗವಾಗಿ ಆರ್ಥಿಕ ಮತ್ತು ವಹಿವಾಟು ವಿವರಗಳನ್ನು ಕೋರಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದರೂ ಆಗಿರುವ ಸಹೋದರ ಡಿ.ಕೆ.ಸುರೇಶ್ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. 

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್‌ 3ರಂದು ದಾಖಲಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರಲ್ಲಿ ಪ್ರಮುಖ  ಮಾಹಿತಿ ಇದೆಯೆಂದು ಭಾವಿಸಲಾಗಿದೆ ಎಂದು ಆರ್ಥಿಕ ಅಪರಾಧಗಳ ವಿಭಾಗ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. ನೋಟಿಸ್‌ ಶುಕ್ರವಾರ ತಲುಪಿದೆ ಎಂದು ಡಿ.ಕೆ. ಸಹೋದರರ ಆಪ್ತ ಮೂಲಗಳು ತಿಳಿಸಿವೆ. 

ಸಹೋದರರ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್‌ ಪಕ್ಷದೊಂದಿಗಿನ ಸಂಬಂಧ, ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ನೀಡಿದ ದೇಣಿಗೆ ಪ್ರಮಾಣ, ಯಾವ ರೀತಿಯಲ್ಲಿ ದೇಣಿಗೆ ಕೊಡಲಾಗಿದೆ ಎಂಬುದರ ಮಾಹಿತಿ, ಈ ಹಣ ಯಾವುದಕ್ಕೆ ಬಳಕೆಯಾಗಿದೆ ಎಂಬುದು ಗೊತ್ತಿದೆಯೇ ಎಂಬ ವಿವರಗಳನ್ನು ಕೇಳಲಾಗಿದೆ. ಇದೇ 19ರೊಳಗೆ ಹಾಜರಾಗುವಂತೆ ಅಥವಾ ಮಾಹಿತಿಯನ್ನು ಒದಗಿಸುವಂತೆ ಸೂಚಿಸಲಾಗಿದೆ. 

ADVERTISEMENT

ಶಿವಕುಮಾರ್ ಅವರು ಬ್ಯಾಂಕ್‌ನಿಂಡ ಹಣ ವರ್ಗಾವಣೆ ಮಾಡಿರುವ ಉದ್ದೇಶ, ಈ ನಿಧಿಯ ಮೂಲ, ಅವರ ಮತ್ತು ಯಂಗ್ ಇಂಡಿಯನ್ ಅಥವಾ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ನಡುವಿನ ಯಾವುದೇ ಸಂವಹನದ ವಿವರಗಳು, ಯಾರ ಸೂಚನೆಯ ಮೇರೆಗೆ ಪಾವತಿಗಳನ್ನು ಮಾಡಲಾಗಿದೆಯೇ ಎಂಬ ಬಗ್ಗೆ ತಿಳಿದಿದೆಯೇ ಎಂಬ ವಿವರಗಳನ್ನು ಕೇಳಲಾಗಿದೆ.  

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಡಿ.ಕೆ. ಶಿವಕುಮಾರ್ ವೈಯಕ್ತಿಕವಾಗಿ ₹25 ಲಕ್ಷ ದೇಣಿಗೆ ನೀಡಿದ್ದಾರೆ ಹಾಗೂ ಅವರ ಟ್ರಸ್ಟ್‌ ಮೂಲಕ ₹2 ಕೋಟಿ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿಯಲ್ಲಿ ಈ ಹಿಂದೆ ಉಲ್ಲೇಖಿಸಿತ್ತು. ಶಿವಕುಮಾರ್ ಅವರು ಯಂಗ್ ಇಂಡಿಯನ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಈ ಮೊತ್ತ ಪಾವತಿಸಿದ್ದಾರೆ ಎಂದೂ ತಿಳಿಸಿತ್ತು. ಸುರೇಶ್ ಅವರು ಯಂಗ್‌ ಇಂಡಿಯನ್‌ ಸಂಸ್ಥೆಗೆ ₹25 ಲಕ್ಷ ದೇಣಿಗೆ ನೀಡಿದ್ದರು. 

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2014ರ ಜೂನ್‌ 26ರಂದು ದಾಖಲಿಸಿದ ಖಾಸಗಿ ದೂರನ್ನು ಪಟಿಯಾಲಾ ಹೌಸ್‌ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ಪರಿಗಣನೆಗೆ ತೆಗೆದುಕೊಂಡ ನಂತರ, ಇ.ಡಿ ತನಿಖೆಯು 2021ರಲ್ಲಿ ಶುರುವಾಗಿತ್ತು. 

ಸೋನಿಯಾ, ರಾಹುಲ್, ಸ್ಯಾಮ್‌ ಪಿತ್ರೊಡಾ, ಕಾಂಗ್ರೆಸ್ ಮುಖಂಡರಾಗಿದ್ದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್, ಖಾಸಗಿ ಕಂಪನಿಯಾದ ಯಂಗ್‌ ಇಂಡಿಯಾ ಮತ್ತು ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದನ್ನು ದೂರಿನಲ್ಲಿ ಎತ್ತಿತೋರಿಸಲಾಗಿತ್ತು. ಇವರೆಲ್ಲ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸೇರಿದ ₹2,000 ಕೋಟಿ ಬೆಲೆಬಾಳುವ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ಹಣದ ಅಕ್ರಮ ವರ್ಗಾವಣೆ ಮಾಡಿದ್ದರು ಎಂಬುದಾಗಿ ದೂರಿನಲ್ಲಿ ಹೇಳಲಾಗಿದೆ ಎಂದು ಇ.ಡಿ ಉಲ್ಲೇಖಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.