ಕಲಬುರ್ಗಿ: ಸೂರ್ಯಗ್ರಹಣದ ವೇಳೆ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಇಲ್ಲಿನ ಬಿದ್ದಾಪೂರ ಕಾಲೊನಿಯ ರಾಯರ ಮಠದಲ್ಲಿ ಭಾನುವಾರ ನವಗ್ರಹ ಶಾಂತಿ ಹೋಮ ಮಾಡಲಾಯಿತು.
ಮಠದ ಆವರಣದಲ್ಲಿ ನಸುಕಿನ 4ಕ್ಕೇ ಸೂರ್ಯನಾರಾಯಣ, ಶನಿದೇವ, ನವಗ್ರಹ ಮೂರ್ತಿಗಳನ್ನು ಮಾಡಿ ಪ್ರತಿಷ್ಠಾಪಿಸಲಾಯಿತು.
ಸರಿಯಾಗಿ ಬೆಳಿಗ್ಗೆ 10.04ಕ್ಕೆ ಗ್ರಹಣ ಆರಂಭವಾದ ತಕ್ಷಣ ಹೋಮ ಕಾರ್ಯಗಳು ಆರಂಭವಾದವು. ಗ್ರಹಣವು ಪೂರ್ಣ ವಿಮೋಚನೆ ಪಡೆದ ಮಧ್ಯಾಹ್ನ 1.30ರವರೆಗೂ ನಿರಂತರ ಮಂತ್ರಘೋಷಗಳು ಮೊಳಗಿದವು.
ವಿಷ್ಣುಸಹಸ್ರನಾಮ ಪಾರಾಯಣ, ರಾಯರ ಅಷ್ಟೋತ್ತರ, ಮಧ್ವನಾಮ ಪಾರಾಯಣ, ಭಗವದ್ಗೀತೆಯ 11ನೇ ಸಗ್ಗ ಪಾರಾಯಣ ಮಾಡಲಾಯಿತು.
ಹವನ ಕಾರ್ಯದಲ್ಲಿ ಪಾಲ್ಗೊಂಡ ನೂರಾರು ಮಹಿಳೆಯರು, ಕೊರೊನಾದಿಂದ ವಿಶ್ವವನ್ನು ರಕ್ಷಿಸು, ಸಮೃದ್ಧಿ ನೀಡು ಎಂದು ಸೂರ್ಯದೇವನಲ್ಲಿ ಬೇಡಿಕೊಂಡರು.
ನವಲಿ ಕೃಷ್ಣಾಚಾರ್ಯ, ಗುರುರಾಜಾಚಾರ್, ಶಾಮಾಚಾರ್, ಪದ್ಮನಾಭಾಚಾರ್, ಶ್ರೀಹರಿ ಆಚಾರ್, ಆಶ್ರಿತ ಆಚಾರ್, ರಾಕೇಂದು ಕನಕವೀಡು ಅವರು ಹೋಮ ಹವನಾದಿಗಳನ್ನು ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.