ಬೆಂಗಳೂರು: ‘ಪರಿಸರ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ನೆಲಸಮ ಮಾಡುವ ಉಪಕ್ರಮಗಳು ಜಾರಿಯಾಗಬೇಕು. ಇದಕ್ಕಾಗಿ ಜನಸಮೂಹದಲ್ಲಿ ಒಗ್ಗಟ್ಟು ಸಾಧ್ಯವಾಗಬೇಕು’ ಎಂದುಹಿರಿಯ ಪತ್ರಕರ್ತ ನಾಗೇಶ ಹೆಗಡೆ ತಿಳಿಸಿದರು.
‘ಸಾರ್ವಜನಿಕ ವಲಯದ ರಕ್ಷಣೆಗಾಗಿ ಬೆಂಗಳೂರು’ ವಾರದ ಆನ್ಲೈನ್ ಉಪನ್ಯಾಸದಲ್ಲಿ ‘ಪರಿಸರ ರಕ್ಷಣೆ: ಊರೊಟ್ಟಿನ ಆಸ್ತಿ ಯಾರಪ್ಪಂದು?’ ಕುರಿತು ಅವರು ಶುಕ್ರವಾರ ಮಾತನಾಡಿದರು.
‘ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಲು ಚಿತ್ರ, ನಾಟಕ, ಕವಿತೆ ಸೇರಿದಂತೆ ಇನ್ನಿತರ ಅಭಿವ್ಯಕ್ತಿ ಮಾಧ್ಯಮಗಳನ್ನು ಬಳಸಿಕೊಳ್ಳಬಹುದು. ಈ ವಿಚಾರದಲ್ಲಿ ಮುಖ್ಯವಾಗಿ ಜನರಲ್ಲಿ ಸಾಮರಸ್ಯ ಹೆಚ್ಚಾಗಬೇಕು. ಆಗ ಬಂಡವಾಳಶಾಹಿಗಳ ದಾಳಿ ಕ್ರಮೇಣ ಕಡಿಮೆಯಾಗಲಿದೆ’ ಎಂದರು.
‘ನೈಲಾನ್ನಿಂದ ತಯಾರಾದ ಉತ್ಪನ್ನಗಳನ್ನು ಈಗ ಕಾಲಿನಿಂದ ಮೇಲಿನವರೆಗೆ ವಿವಿಧ ವಸ್ತುಗಳಾಗಿ ಧರಿಸುತ್ತಿದ್ದೇವೆ.ಇವುಗಳ ತಯಾರಿಗಾಗಿನೀಲಗಿರಿ ಮರಗಳ ‘ಹಸಿರುಮರುಭೂಮಿ’ ಸೃಷ್ಟಿಯಾಗುತ್ತಿದೆ. ಒಮ್ಮೆ ನೆಡುವ ನೀಲಗಿರಿಗೆಕೂಲಿ, ಗೊಬ್ಬರ, ಬೇಲಿ, ನೀರಿನ ಅಗತ್ಯ ಇರುವುದಿಲ್ಲ. ಇದರಿಂದ ಗ್ರಾಮೀಣ ಭಾಗ ದಾರಿದ್ರ್ಯದ ಕಡೆಗೆ ಸಾಗುತ್ತಿದೆ.ಪಠ್ಯಪುಸ್ತಕಗಳಲ್ಲೂ ನೈಲಾನ್ ಕುರಿತಾದ ಉಲ್ಲೇಖವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಈಗ ಅಭಿವೃದ್ಧಿಯ ಯುಗ ಬರಲಿದೆ’ ಎಂದು ಎಲ್ಲರೂ ಕೂಗುತ್ತಿದ್ದಾರೆ. ನಿಜವಾಗಿ ಬರುತ್ತಿರುವುದು ‘ಅಭಿವೃದ್ಧಿಯ ಅಂಧಯುಗ’. ನೀವು ಪ್ರಪಾತದ ಅಂಚಿಗೆ ಬಂದಿದ್ದರೆ, ಒಂದು ಹೆಜ್ಜೆ ಹಿಂದೆ ಇಡುವುದೇ ನಿಜವಾದ ಪ್ರಗತಿ ಎನ್ನುವಂತೆ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಬೇಕು’ ಎಂದು ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.