ADVERTISEMENT

‘ಕೊಡಗು ಪ್ರವಾಸಿ ಉತ್ಸವ’ಕ್ಕೆ ₹ 1 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 12:56 IST
Last Updated 8 ಜನವರಿ 2019, 12:56 IST
ಪ್ರವಾಸಿ ಉತ್ಸವದ ಲಾಂಛನ
ಪ್ರವಾಸಿ ಉತ್ಸವದ ಲಾಂಛನ   

ಮಡಿಕೇರಿ: ಪ್ರಕೃತಿ ವಿಕೋಪದ ಬಳಿಕ ಕೊಡಗಿನಲ್ಲಿ ನೆಲಕಚ್ಚಿರುವ ಪ್ರವಾಸೋದ್ಯಮದ ಚೇತರಿಕೆಗೆ ‘ಕೊಡಗು ಪ್ರವಾಸಿ ಉತ್ಸವ’ ಆಯೋಜಿಸಲಾಗಿದೆ. ಜ.11ರಿಂದ ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕಾಗಿ ನಗರದ ಗಾಂಧಿ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ಧಗೊಳ್ಳುತ್ತಿದೆ.

ಪ್ರವಾಸೋದ್ಯಮ ಇಲಾಖೆ ಉತ್ಸವಕ್ಕೆ ₹ 1 ಕೋಟಿ ವೆಚ್ಚ ಮಾಡುತ್ತಿದೆ. ಜೊತೆಗೆ, ತೋಟಗಾರಿಕೆ ಇಲಾಖೆಯು ರಾಜಾಸೀಟ್‌ನಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ಸಿದ್ಧತೆ ಕೈಗೊಂಡಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಕೊಡಗಿನ ಕುಲದೇವತೆ ಕಾವೇರಿ ಮಾತೆ, ತೀರ್ಥೋದ್ಭವ ಬ್ರಹ್ಮಕುಂಡಿಕೆಯ ಪ್ರತಿರೂಪ, ಆನೆ, ನವಿಲು, ತಬಲ ಕಲಾಕೃತಿಗಳು ಕಣ್ಮನ ಸೆಳೆಯಲಿವೆ. ಮೂರು ದಿನವೂ ಬೆಳಿಗ್ಗೆ 10ರಿಂದ ರಾತ್ರಿ 8.30ರ ತನಕ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಂಗಳವಾರ ಮಾಹಿತಿ ನೀಡಿದರು.

ADVERTISEMENT

11ರಂದು ಎಂ.ಡಿ.ಪಲ್ಲವಿ ತಂಡದಿಂದ ಗಾಯನ, 12ರಂದು ಸರಿಗಮಪ ತಂಡದಿಂದ ಸಂಗೀತ ಸಂಜೆ, 13ರಂದು ಅರ್ಜುನ್‌ ಜನ್ಯ ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಕೊಡವ ಹಾಗೂ ಅರೆಭಾಷೆ ನೃತ್ಯ ಪ್ರದರ್ಶನವೂ ಇರಲಿದೆ. ನಿತ್ಯ ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಶ್ವಾನ ಪ್ರದರ್ಶನ, ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌, ಆಹಾರ ಮೇಳ, ಛಾಯಾಚಿತ್ರ ಪ್ರದರ್ಶನವೂ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ ಎಂದರು.

‘ಹೊಸ ವರ್ಷದ ಬಳಿಕ ಕೊಡಗಿನತ್ತ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊಡಗು ಸುರಕ್ಷಿತವಾಗಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಂತ್ರಸ್ತರ ಮನೆ ನಿರ್ಮಾಣ ಸೇರಿದಂತೆ ಶಾಶ್ವತ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.