ADVERTISEMENT

ಕಲಬುರ್ಗಿಯಲ್ಲಿ ಹೊಸದಾಗಿ ಐವರಿಗೆ ಕೋವಿಡ್ 19

ದಿನಸಿ ಅಂಗಡಿಗಳ ಮೇಲಿನ ಸಮಯದ ನಿರ್ಬಂಧ ತೆರವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 9:12 IST
Last Updated 20 ಏಪ್ರಿಲ್ 2020, 9:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಲಬುರ್ಗಿ: ಇತ್ತೀಚೆಗೆ ‌ಮೃತಪಟ್ಟ‌ ಮೋಮಿನಪುರದ 55 ವರ್ಷದ ಬಟ್ಟೆ ವ್ಯಾಪಾರಿಯ ಮೂವರು ಸಂಬಂಧಿಗಳು ಸೇರಿದಂತೆ ಒಟ್ಟು ಐವರಿಗೆ ಕೋವಿಡ್ ‌19 ಸೋಂಕು ದೃಢಪಟ್ಟಿದೆ.

13 ವರ್ಷದ ‌ಬಾಲಕ, 19 ವರ್ಷದ ಯುವಕ ಹಾಗೂ 30 ವರ್ಷದ‌ ಮಹಿಳೆಗೆ ಸೋಂಕು ತಗುಲಿದೆ. ಇವರಿಗೆ ಬಟ್ಟೆ ವ್ಯಾಪಾರಿಯಿಂದ ಸೋಂಕು ಹರಡಿದೆ.50 ವರ್ಷದ ವ್ಯಕ್ತಿಗೆ ಈಚೆಗೆ ಸೋಂಕಿನಿಂದ ಮೃತಪಟ್ಟ ‌ಹಣ್ಣಿನ ವ್ಯಾಪಾರಿಯಿಂದ ಸೋಂಕು ತಗುಲಿದೆ.17 ವರ್ಷದ ಬಾಲಕನಿಗೆ ಕೋವಿಡ್ 19 ಸೋಂಕಿತ ರೋಗಿ ಸಂಖ್ಯೆ 175ನೇಯವರಿಂದ ಹರಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 27ಕ್ಕೇರಿದಂತಾಗಿದೆ.

ದಿನಸಿ ಅಂಗಡಿಗಳ ಮೇಲಿನ ಸಮಯದ ನಿರ್ಬಂಧ ತೆರವು

ADVERTISEMENT

ಜನದಟ್ಟಣಿಯನ್ನು ತಡೆಯಲು ‌ನಗರ ಪೊಲೀಸ್ ‌ಆಯುಕ್ತರು ಹಾಗೂ ಜಿಲ್ಲಾ ‌ಪೊಲೀಸ್ ವರಿಷ್ಠಾಧಿಕಾರಿ ದಿನಸಿ, ಹಾಲಿನ ಅಂಗಡಿಗಳಿಗೆ ವಿಧಿಸಿದ್ದ ಸಮಯದ ನಿರ್ಬಂಧವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಇಬ್ಬರೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಇಲ್ಲದಿದ್ದರೂ ಕಲಬುರ್ಗಿ ನಗರದಲ್ಲಿ ಪೊಲೀಸ್ ‌ಕಮಿಷನರ್ ಎನ್. ಸತೀಶಕುಮಾರ್ ಅವರು ನಗರದ ಸೂಪರ್ ‌ಮಾರ್ಕೆಟ್ ಹಾಗೂ ಹಲವು ದಿನಸಿ ಅಂಗಡಿಗಳನ್ನು ತೆರೆಯಲು ನಿರ್ದಿಷ್ಟ ‌ಸಮಯವನ್ನು ನಿಗದಿ ಮಾಡಿದ್ದರು. ದಿನಸಿ ಅಂಗಡಿಗಳಿಗೆ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸುವಂತೆ ‌ಸೂಚಿಸಿದ್ದರು. ಇದರಿಂದಾಗಿ ಅಂಗಡಿಗಳ ‌ಮುಂದೆ ಜನದಟ್ಟಣಿ ಹೆಚ್ಚಾಗುತ್ತಿತ್ತು.

ಇದನ್ನು ಮಾಧ್ಯಮಗಳ ಮೂಲಕ ಗಮನಿಸಿದ ಮುಖ್ಯಮಂತ್ರಿ ಕಚೇರಿ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಅತ್ಯಗತ್ಯ ಸೇವೆಯಾದ ದಿನಸಿ‌ ಅಂಗಡಿಗಳ ಮೇಲೆ ವಿಧಿಸಿದ ಸಮಯದ ‌ಮಿತಿಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ‌ಶರತ್ ಬಿ. ಅವರಿಗೆ ವಿಡಿಯೊ ಕಾನ್ಫ್ರೆನ್ಸ್ನಲ್ಲಿ ನಿರ್ದೇಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.