ADVERTISEMENT

ವಿಧಾನಸೌಧದ ಕೊಠಡಿಯಲ್ಲಿ ಪೂಜೆ ನೆರವೇರಿಸಿದ ನೂತನ ಸಚಿವ ಎಂಟಿಬಿ ನಾಗರಾಜ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 7:05 IST
Last Updated 25 ಜನವರಿ 2021, 7:05 IST
ವಿಧಾನಸೌಧದ ಕೊಠಡಿಯಲ್ಲಿ ಪೂಜೆ ನೆರವೇರಿಸಿದ ನೂತನ ಸಚಿವ ಎಂಟಿಬಿ ನಾಗರಾಜ್
ವಿಧಾನಸೌಧದ ಕೊಠಡಿಯಲ್ಲಿ ಪೂಜೆ ನೆರವೇರಿಸಿದ ನೂತನ ಸಚಿವ ಎಂಟಿಬಿ ನಾಗರಾಜ್   

ಬೆಂಗಳೂರು: ‘ವಸತಿ ಖಾತೆ ನೀಡುವಂತೆ ಮುಖ್ಯಮಂತ್ರಿ ಬಳಿ ಕೇಳಿದ್ದು ನಿಜ. ಆದರೆ, ಕಾರಣಾಂತರಗಳಿಂದ ಆ ಖಾತೆ ಸಿಗಲಿಲ್ಲ. ಆದರೆ, ಈಗ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಕೊಟ್ಟಿದ್ದಾರೆ. ಈ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಸಚಿವ ಎಟಿಬಿ ನಾಗರಾಜ್‌ ಹೇಳಿದರು.

ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿಯಲ್ಲಿ ಸೋಮವಾರ ಪೂಜೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಆ ಮೂಲಕ, ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆ ಹೆಸರು ತರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ’ ಎಂದರು.

ಆರಂಭದಲ್ಲಿ ಅಬಕಾರಿ ಖಾತೆ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ದ ಎಂಟಿಬಿ ನಾಗರಾಜು, ಪೌರಾಡಳಿತ ಖಾತೆ ನೀಡಿದ ಬಳಿಕ ಕೊಠಡಿ ಪೂಜೆಗೆ ನಿರ್ಧರಿಸಿದ್ದರು. ಪೂಜೆಯಲ್ಲಿ ಎಂಟಿಬಿ ನಾಗರಾಜು ಅವರು ಕುಟುಂಬ ಸದಸ್ಯರೂ ಭಾಗವಹಿಸಿದರು.

ADVERTISEMENT

‘ಪಕ್ಷ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ನಾವೆಲ್ಲರೂ ಬದ್ಧರಾಗಿರುತ್ತೇವೆ. ನಾನು ಹೊಸಕೋಟೆ ಕ್ಷೇತ್ರದವನು. ಜಿಲ್ಲಾ ಉಸ್ತುವಾರಿ ಕೊಡಿ ಎಂದು ಬೇಡಿಕೆ ಇಟ್ಟಿಲ್ಲ. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ’ ಎಂದೂ ಎಂಟಿಬಿ ನಾಗರಾಜು ಹೇಳಿದರು.

‘ಮಿತ್ರ ಮಂಡಳಿ’ಯಲ್ಲಿ (ಜೊತೆಯಾಗಿ ಬಿಜೆಪಿ ಸೇರಿದ ಶಾಸಕರ ಗುಂಪು) ಬಿರುಕು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಮಿತ್ರ ಮಂಡಳಿಯಲ್ಲಿ ಯಾವುದೇ ಬಿರುಕು ಇಲ್ಲ. ಯಾವುದೇ ಅಸಮಾಧಾನವೂ ಇಲ್ಲ. ನಾವೆಲ್ಲರೂ ಸಮಾಧಾನವಾಗಿಯೇ ಇದ್ದೇವೆ’ ಎಂದರು.

ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನದ ಬಗ್ಗೆ ಅವರು, ‘ಈಗ ವಿಶ್ವನಾಥ್ ಅವರಿಗೆ ಸ್ವಲ್ಪ ಬೇಸರ ಆಗಿದೆ. ಇಂತಹ ಸಂದರ್ಭದಲ್ಲಿ ಬೇಸರ ಆಗುವುದು ಸಹಜ. ಆದರೆ, ಮುಂದಿನ ದಿನಗಳಲ್ಲಿ ಅದೆಲ್ಲವೂ ಸರಿಯಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲವನ್ನು ಸರಿಪಡಿಸುತ್ತಾರೆ ಎಂಬ ವಿಶ್ಚಾಸ ಇದೆ’ ಎಂದರು.

ಸಮಾಧಾನದಿಂದ ಇರಬೇಕು: ಎಚ್. ವಿಶ್ವನಾಥ್ ಅಸಮಾಧಾನದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ತೋಟಗಾರಿಕಾ ಸಚಿವ ಆರ್‌. ಶಂಕರ್‌, ‘ಸರ್ಕಾರ ಬದಲಾವಣೆಗಾಗಿ ನಾವೆಲ್ಲಾ ಬಿಜೆಪಿಗೆ ಒಂದಾಗಿ ಬಂದಿದ್ದೇವೆ. ಸಚಿವ ಸ್ಥಾನ ಸಿಗದೆ ಇಷ್ಟೆಲ್ಲಾ ನೋವು ಆದರೂ ಯಾಕೆ ಮೌನವಾಗಿದ್ದೀರಿ ಎಂದು ಕ್ಷೇತ್ರದ ಜನ ಕೇಳುತ್ತಿದ್ದರು. ಈಗ ನನಗೆ ಅವಕಾಶ ಸಿಗಲಿಲ್ಲವೇ. ಯಾರೇ ಆದರೂ ಸಮಾಧಾನದಿಂದ ಇರಬೇಕು. ಕೇವಲ ಮಾತಿನಿಂದ ಏನೂ ಸಾಧಿಸಲು ಆಗಲ್ಲ. ಏನೇ ಆದರೂ ಪ್ರೀತಿಯಿಂದ ಗೆಲ್ಲಬೇಕು’ ಎಂದು ಕಿವಿಮಾತು ಹೇಳಿದರು.

‘ವಿಶ್ವನಾಥ್ ಅವರಿಗೆ ನೋವಾಗಿದೆ. ಹಾಗಂತ ಮಾತನಾಡುತ್ತಾ ಕಳಿತರ ಆಗುತ್ತದೆಯೇ. ತಮ್ಮ ನೋವನ್ನು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಬೇಕ. ಇಲ್ಲವೇ ಮುಖ್ಯಮಂತ್ರಿ ಬಳಿ ಚರ್ಚಿಸಬೇಕು. ಅದು ಬಿಟ್ಟು ಮಾತನಾಡುತ್ತಲೇ ಇದ್ದರೆ ಹೇಗೆ’ ಎಂದೂ ಪ್ರಶ್ನಿಸಿದರು.

‘ಮಿತ್ರಮಂಡಳಿಯಲ್ಲಿ ಅಸಮಾಧಾನ ಎಂದು ಏನೂ ಇಲ್ಲ. ಅಷ್ಟಕ್ಕೂ ನಾವು ಈ ಹಿಂದೆ ಮಿತ್ರಮಂಡಳಿ ಸದಸ್ಯರು ಅಂತಲ್ಲ, ಇಂದು ನಾವೆಲ್ಲಾ ಬಿಜೆಪಿ ಪಕ್ಷದವರು. ವೈಯಕ್ತಿಕ ಕಾರಣಕ್ಕೆ ಅಸಮಾಧಾನ ತೋರಿಸಿದರೆ ಹೇಗೆ. ಮಂತ್ರಿ ಅನ್ನೋದೆ ದೊಡ್ಡ ಸೌಭಾಗ್ಯ. ಸಚಿವ ಸ್ಥಾನ ದೊರೆತಾಗ ಜನಪರ ಕೆಲಸ ಮಾಡಬೇಕು. ನಾವು ಉತ್ತಮವಾಗಿ ಕೆಲಸ ಮಾಡಿದರೆ ಬಿಜೆಪಿ ಸರ್ಕಾರ ಮತ್ತೆ ಐದಾರು ಬಾರಿ ಬರಲಿದೆ. ಏನೇ ಅಸಮಾಧಾನ ಇದ್ದರೂ ಮುಖ್ಯಮಂತ್ರಿ, ಪಕ್ಷದ ವೇದಿಕೆ ಇದೆ. ಅಲ್ಲಿ ಚರ್ಚಿಸುವುದು ಒಳ್ಳೆಯದು’ ಎಂದೂ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.