ADVERTISEMENT

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆ ಪ್ರತ್ಯಕ್ಷ; ಆತಂಕ

​ಪ್ರಜಾವಾಣಿ ವಾರ್ತೆ
Published 2 ಮೇ 2019, 21:30 IST
Last Updated 2 ಮೇ 2019, 21:30 IST
ಸುಂಟಿಕೊಪ್ಪ‌ ಸಮೀಪದ ಶ್ರೀದೇವಿ ತೋಟದಲ್ಲಿ ಗುರುವಾರ ಮಧ್ಯಾಹ್ನ ಕಾಣಿಸಿಕೊಂಡ ಆನೆ
ಸುಂಟಿಕೊಪ್ಪ‌ ಸಮೀಪದ ಶ್ರೀದೇವಿ ತೋಟದಲ್ಲಿ ಗುರುವಾರ ಮಧ್ಯಾಹ್ನ ಕಾಣಿಸಿಕೊಂಡ ಆನೆ   

ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ.

ಆಹಾರದ ಕೊರತೆಯಿಂದ ಬಳಲುತ್ತಿರುವ ಕಾಡಾನೆಗಳು ಸುತ್ತಮುತ್ತಲಿನ ಕಾಫಿ, ಮೆಣಸು, ಹಲಸಿನ ತೋಟಗಳಿಗೆ ಲಗ್ಗೆಯಿಡುತ್ತಿದ್ದು, ಫಸಲಿಗೆ ಬಂದ ಬೆಳೆ ಹಾನಿಯಾಗುತ್ತಿದೆ.

ಗುರುವಾರ ಮಧ್ಯಾಹ್ನದ ವೇಳೆಯೇ ಸಮೀಪದ ಶ್ರೀದೇವಿ ತೋಟದಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೆದರಿ ಅಲ್ಲಿಂದ ಓಡಿಹೋಗಿದ್ದಾರೆ. ಇದರಿಂದ ಹೆದರಿದ ಕಾಡಾನೆ ಅಲ್ಲಿನ‌ ಕಾಫಿ ಗಿಡಗಳನ್ನು ತುಳಿದು‌ ನಾಶಪಡಿಸಿ ಅಲ್ಲಿಂದ ಪಕ್ಕದ ತೋಟದತ್ತ ಪಲಾಯನ ಮಾಡಿದೆ.

ADVERTISEMENT

ಬುಧವಾರ ರಾತ್ರಿ‌ ನೆಟ್ಲಿ ‘ಬಿ’ ತೋಟದ ಕಾರ್ಮಿಕರ ಲೈನ್ ಮನೆಯತ್ತ ಹಾದು ಹೋಗಿದ್ದು, ಕಾರ್ಮಿಕರು ಭಯಭೀತರಾಗಿದ್ದಾರೆ.

ಪನ್ಯ, ನಾಕೂರು, ಕಂಬಿಬಾಣೆ, ಮತ್ತಿಕಾಡು ಭಾಗಗಳಲ್ಲೂ ಕಾಡಾನೆಗಳು ಬೆಳೆದು ನಿಂತ ಫಸಲುಗಳನ್ನು ತಿಂದು ನಾಶ ಪಡಿಸುತ್ತಿವೆ.

ಈ ಭಾಗಗಳಲ್ಲಿ ರಾತ್ರಿ ವೇಳೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಚೆಗೆ ಹಗಲು ಹೊತ್ತಿನಲ್ಲೂ ದಾಳಿ ಮಾಡುತ್ತಿರುವುದರಿಂದ ಕಾರ್ಮಿಕರು, ಸಾರ್ವಜನಿಕರು ಹಾಗೂ ವಾಹನ ಚಾಲಕರು ಓಡಾಡಲು ಭಯ ಪಡುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.