ಮೈಸೂರು/ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. ಪಾಲಿಬೆಟ್ಟ, ನೆಲ್ಯಹುದಿಕೇರಿ, ಅಮ್ಮತ್ತಿ, ಸುಂಟಿಕೊಪ್ಪ, ನಾಪೋಕ್ಲು, ಚೇರಂಬಾಣೆಯಲ್ಲಿ ಒಳ್ಳೆಯ ಮಳೆಯಾಗಿದೆ.
ಹಲವು ದಿನಗಳಿಂದ ಈ ಭಾಗದಲ್ಲಿ ಮಳೆಯಿಲ್ಲದೆ ಬಿಸಿಲ ತಾಪಕ್ಕೆ ಕಾಫಿ ಗಿಡ, ಕರಿಮೆಣಸಿನ ಬಳ್ಳಿಗಳು ಒಣಗುತ್ತಿದ್ದವು. ಬೆಳೆಗಾರರು ಕೆರೆಯಿಂದ ಕಾಫಿ ತೋಟಕ್ಕೆ ನೀರು ಹಾಯಿಸುತ್ತಿದ್ದರು. ಕೆಲವು ಭಾಗದಲ್ಲಿ ಕೆರೆಗಳೂ ಬತ್ತಿದ್ದವು. ಇದೀಗ ಸುರಿದ ಮಳೆಯಿಂದ ಬೆಳೆಗಾರರು ನಿಟ್ಟುಸಿರುಬಿಟ್ಟಿದ್ದಾರೆ. ವಿರಾಜಪೇಟೆಯಲ್ಲಿ 27 ಮಿ.ಮೀ ಮಳೆಯಾಗಿದ್ದರೆ, ಸೋಮವಾರಪೇಟೆಯಲ್ಲಿ 26 ಮಿ.ಮೀ ಮಳೆಯಾಗಿದೆ.
ಅರಣ್ಯ ಭಾಗದಲ್ಲಿ ಮಳೆ:ಬಂಡೀಪುರದ ಎ.ಎಂ.ಗುಡಿ ವಲಯದಲ್ಲಿ ಮಳೆ ಸುರಿದಿದೆ. ಒಣಗಿದ್ದ ಕಾಡಿನಲ್ಲಿ ಕಾಳ್ಗಿಚ್ಚಿನ ಆತಂಕ ಸ್ವಲ್ಪ ಮಟ್ಟಿಗೆ ದೂರವಾಗಿದೆ. ಈ ಭಾಗದಲ್ಲಿ ಕೆರೆಕಟ್ಟೆಗಳು ಬತ್ತಿದ್ದು, ವನ್ಯಜೀವಿಗಳು ನೀರು ಕುಡಿಯಲು ಪರದಾಡುತ್ತಿದ್ದವು. ಸದ್ಯ, ಬಿದ್ದಿರುವ ಮಳೆಯು ಸಣ್ಣಪುಟ್ಟ ಹಳ್ಳಗಳಲ್ಲಿ ನೀರು ನಿಲ್ಲುವಂತೆ ಮಾಡಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು, ಚೊಕ್ಕನಹಳ್ಳಿಯಲ್ಲಿ 20.5 ಮಿ.ಮೀ, ಹುಣಸೂರಿನ ಹನಗೋಡಿನಲ್ಲಿ 7 ಮಿ.ಮೀ ಮಳೆಯಾಗಿದೆ. ಪಿರಿಯಾಪಟ್ಟಣದಲ್ಲಿ ತುಂತುರು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.