ವಿರಾಜಪೇಟೆ: ಸಮೀಪದ ಪಾಲಂಗಾಲ ಗ್ರಾಮದ ಹೊಂಡದಲ್ಲಿ ಸಿಲುಕಿಕೊಂಡಿದ್ದ ಮರಿಯಾನೆ ಸೇರಿದಂತೆ 5 ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ.
ಕರಿನೆರವಂಡ ಅಯ್ಯಪ್ಪ ಅವರ ತೋಟದಲ್ಲಿದ್ದ ಹೊಂಡಕ್ಕೆ ಮಂಗಳವಾರ ರಾತ್ರಿಯೇ ಆನೆಗಳು ಬಿದ್ದಿವೆ. ಮೇಲೆ ಬರಲು ಸಾಧ್ಯವಾಗದೆ ಒದ್ದಾಡುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆ ವಲಯಾಧಿಕಾರಿ ಗೋಪಾಲ್ ನೇತೃತ್ವದ ತಂಡವು ಜೆಸಿಬಿ ಸಹಾಯದಿಂದ ಕಾರ್ಯಾಚರಣೆ ನಡೆಸಿತು. ಹೊಂಡದ ಒಂದು ಬದಿಯಲ್ಲಿ ಮಣ್ಣು ತೆಗೆದು ಆನೆಗಳು ಮೇಲೆ ಬರಲು ಅನುವು ಮಾಡಿಕೊಡಲಾಯಿತು.
ಗ್ರಾಮಸ್ಥರ ಆಕ್ರೋಶ: ಆನೆಗಳನ್ನು ಮೇಲೆತ್ತುವ ಕಾರ್ಯಾಚರಣೆ ನಡೆಸಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಸ್ಥಳಕ್ಕೆ ಬಂದ ಡಿಎಫ್ಒ ಕ್ರಿಸ್ತರಾಜು ಮನವೊಲಿಸಿದರು. ಆರು ಕಾಡಾನೆ ಸೆರೆ ಹಿಡಿಯಲು ಅನುಮತಿ ದೊರೆತಿದೆ. ಶೀಘ್ರ ಕಾರ್ಯಾಚರಣೆ ನಡೆಯಲಿದೆ ಎಂದು ಭರವಸೆ ನೀಡಿದರು.
ಕಾಡಾನೆ ಹಾವಳಿ ಹೆಚ್ಚಾಗಿದ್ದು, ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಆನೆ ದಾಳಿಯಿಂದ ಮೂವರು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಈ ಹಿಂದೆ ಆನೆ ಕೊಂದ ಪ್ರಕರಣ ಸಂಬಂಧ ಗ್ರಾಮಸ್ಥರ ಕೋವಿಗಳನ್ನು ವಶಕ್ಕೆ ಪಡೆದಿದ್ದು, ಅವು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕೊಳೆಯುತ್ತಿವೆ. ಕೆಲ ದಿನಗಳ ಹಿಂದೆ ಗಂಡು ಮರಿಯಾನೆಗೆ ಗುಂಡು ಹೊಡೆದ ಪ್ರಕರಣದಡಿ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮಾಲೇಟಿರ ಪ್ರಶಾಂತ್ ಆರೋಪಿಸಿದರು.
ಕೆಲ ದಿನಗಳ ಹಿಂದೆ ಇದೇ ಗ್ರಾಮದಲ್ಲಿ ಕಾಡಾನೆ ಮರಿಯೊಂದು ಕೆರೆಯಲ್ಲಿ ಸಿಲುಕಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.