ADVERTISEMENT

‘ನಿಖಿಲ್‌ ನಾಮಪತ್ರ ಕ್ರಮಬದ್ಧ’: ಚುನಾವಣಾ ವೀಕ್ಷಕರ ವಿವರಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 0:00 IST
Last Updated 1 ಏಪ್ರಿಲ್ 2019, 0:00 IST

ಮಂಡ್ಯ: ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಪರಿಶೀಲನೆ ವೇಳೆ ಉಂಟಾಗಿದ್ದ ಗೊಂದಲಕ್ಕೆ ಸಂಬಂಧಿಸಿದಂತೆ ಭಾನುವಾರ ಚುನಾವಣಾ ವೀಕ್ಷಕರು ಸುಮಲತಾ ಪರ ಏಜೆಂಟ್‌ ಮದನ್‌ ಕುಮಾರ್‌ ಅವರಿಗೆ ವಿವರಣೆ ನೀಡಿದ್ದಾರೆ.

ವೀಕ್ಷಕರಾದ ರಂಜಿತ್‌ ಕುಮಾರ್‌, ರಾಣಿ ನಗರ್‌ ಐದು ಪುಟಗಳ ವಿವರಣೆ ನೀಡಿದ್ದಾರೆ. ‘ನಮ್ಮ ಸಮ್ಮುಖದಲ್ಲೇ ನಿಖಿಲ್‌ ಕುಮಾರಸ್ವಾಮಿ ಅವರ ನಾಮಪತ್ರ ಅನುಮೋದನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರಮಾಣ ಪತ್ರದಲ್ಲಿ ಲೋಪ ಕಂಡುಬಂದಿತ್ತು. ಅದನ್ನು ಪರಿಷ್ಕರಣೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

’ಈ ಸಂದರ್ಭದಲ್ಲಿ ಹಾಜರಿದ್ದ ಸುಮಲತಾ ಪರ ಏಜೆಂಟರು ಯಾವುದೇ ಆಕ್ಷೇಪಣೆ ಸಲ್ಲಿಸಲಿಲ್ಲ. ಅನುಮೋದನೆಯ ನಂತರ ಆಕ್ಷೇಪಣೆ ಸಲ್ಲಿಸಿದ್ದಾರೆ. ಹೀಗಾಗಿ ನಾಮಪತ್ರ ಕ್ರಮಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಆಕ್ಷೇಪಣೆ ಪರಿಶೀಲಿಸುವ ಕುರಿತು ವಿಡಿಯೊ ಕೇಳಿದ್ದೀರಿ. ಲಭ್ಯ ಇರುವ ವಿಡಿಯೊವನ್ನು ಈಗಾಗಲೇ ನೀಡಲಾಗಿದೆ. ಅಂದು ಪೂರ್ಣ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಿಲ್ಲ. ನೀವು ಆಕ್ಷೇಪಣೆ ಸಲ್ಲಿಸಿರುವ ಸಂದರ್ಭದಲ್ಲಿ ಕ್ಯಾಮೆರಾ ಬೇರೆಡೆ ತಿರುಗಿದೆ. ಈ ಸಂಬಂಧ ಛಾಯಾಗ್ರಾಹಕನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ನಾಮಪತ್ರ ಪರಿಶೀಲನೆಯಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ನಿಮ್ಮ ಆರೋಪಗಳೆಲ್ಲವೂ ಸುಳ್ಳುಗಳಿಂದ ಕೂಡಿವೆ’ ಎಂದು ತಿಳಿಸಿದ್ದಾರೆ.

‘ವೀಕ್ಷಕರು ನೀಡಿರುವ ವಿವರಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು’ ಎಂದು ಮದನ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.