ರಾಮನಗರ: ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಶುಕ್ರವಾರ ನಡೆದ ನಿಖಿಲ್ ಕುಮಾರಸ್ವಾಮಿ- ರೇವತಿ ವಿವಾಹ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಮದುವೆಗೆ ಬಂದವರಿಗೆ ಪ್ರವೇಶ ದ್ವಾರದ ಬಳಿ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಇತ್ತು. ಆದರೆ ಹೆಚ್ಚಿನವರು ಮಾಸ್ಕ್ ಧರಿಸಿರಲಿಲ್ಲ. ಪೊಲೀಸರು ಒಟ್ಟು 42 ವಾಹನಗಳ ಓಡಾಟಕ್ಕೆ ಅನುಮತಿ ನೀಡಿದ್ದರು. ಪ್ರತಿ ವಾಹನವನ್ನು ತಪಾಸಣೆ ಮಾಡಿ ಬಿಡಲಾಯಿತು. ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಮದುವೆ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮಂಡ್ಯ ಗಡಿಯಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಸಾರ್ವಜನಿಕರಿಗೆ ಸಂಪೂರ್ಣ ಪ್ರವೇಶ ನಿರ್ಬಂಧಿಸಲಾಗಿತ್ತು.
ಮದುವೆ ಸಂಬಂಧ ಪೊಲೀಸರಿಂದ ವರದಿ ಪಡೆಯುವುದಾಗಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಪೊಲೀಸರೇ 42 ವಾಹನಗಳ ಓಡಾಟಕ್ಕೆ ಅನುಮತಿ ಕೊಟ್ಟಿದ್ದರು. ಷರತ್ತುಗಳ ಮಿತಿಯೊಳಗೇ ಮದುವೆ ನೆರವೇರಿದೆ. ಮೆಲ್ನೋಟಕ್ಕೆ ಯಾವುದೇ ಲೋಪವಿಲ್ಲ. ಹೀಗಾಗಿ ಪ್ರಕರಣ ದಾಖಲಿಸುವ ಸಾಧ್ಯತೆ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಮನಗರ ಎಸ್ಪಿ ಅನೂಪ್ ಶೆಟ್ಟಿ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.