ಹುಬ್ಬಳ್ಳಿ:‘ಸಚಿವರಾಗಬೇಕು ಎನ್ನುವ ಕಾರಣಕ್ಕಾಗಿಯೇ ರಾಜಕಾರಣಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಿನ ರಾಜಕಾರಣಿಗಳಲ್ಲಿ ನೈತಿಕತೆಯೇ ಇಲ್ಲವಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಸಚಿವ ಸಂಪುಟ ವಿಸ್ತರಣೆಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಂತಿ ಮೇಲೆ ನಡೆವಂತಾಗಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು, ಯಾರನ್ನು ಕೈ ಬಿಡಬೇಕು ಎಂಬುದೇ ತಲೆನೋವಾಗಿದೆ’ ಎಂದರು.
‘ಎಲ್ಲರಿಗೂ ಸಚಿವ ಸ್ಥಾನ, ಎರಡೆರಡು ಹುದ್ದೆ ಬೇಕು. ಸಚಿವ ಸ್ಥಾನ ದೊರೆಯದಿದ್ದಲ್ಲಿ ಪಕ್ಷಾಂತರ ಮಾಡುತ್ತಾರೆ. ಇಲ್ಲವೇ, ರಾಜೀನಾಮೆಗೆ ಮುಂದಾಗುತ್ತಾರೆ. ಅಂಥವರನ್ನು ಸಮಾಧಾನಪಡಿಸುವುದರಲ್ಲೇ ಯಡಿಯೂರಪ್ಪ ಸಮಯ ಹಾಳಾಗುತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ರಾಜಕಾರಣಕ್ಕೆ ಭವಿಷ್ಯವಿಲ್ಲ ಎನ್ನುವಂತಾಗಿದೆ’ ಎಂದು ಹೇಳಿದರು.
‘ಸಂಪೂರ್ಣ ಬಹುಮತ ಪಡೆದ ಪಕ್ಷ ಮಾತ್ರ ಆಡಳಿತ ನಡೆಸಬೇಕು. ಸಮ್ಮಿಶ್ರ ಸರ್ಕಾರಕ್ಕೆ ಮುಂದಾದರೆ ಯಾವ ಕ್ಷಣದಲ್ಲಾದರೂ ಪತನವಾಗಬಹುದು. ಜೆಡಿಎಸ್–ಕಾಂಗ್ರೆಸ್, ಜೆಡಿಎಸ್–ಬಿಜೆಪಿ ಸೇರಿ ಸರ್ಕಾರ ನಡೆಸಿದಾಗಲೂ, ಪೂರ್ಣಾವಧಿ ಆಡಳಿತ ನಡೆಸಲು ಸಾಧ್ಯವಾಗಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.