ADVERTISEMENT

‘ಬಿಇಎಂಎಲ್‌ ಖಾಸಗೀಕರಣವಿಲ್ಲ’: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 20:44 IST
Last Updated 8 ಮಾರ್ಚ್ 2022, 20:44 IST
ಮುರುಗೇಶ
ಮುರುಗೇಶ    

ಬೆಂಗಳೂರು: ಕೋಲಾರದಲ್ಲಿರುವ ಬಿಇಎಂಎಲ್‌ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿಲ್ಲ. ಬಳಕೆಯಾಗದ ಆಸ್ತಿಗಳನ್ನು ಮಾತ್ರ ವಿಲೇವಾರಿ ಮಾಡುತ್ತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಗೋವಿಂದರಾಜು ಪ್ರಶ್ನೆಗೆ ಮಂಗಳವಾರ ಉತ್ತರ ನೀಡಿದ ಅವರು, ‘ಬಿಇಎಂಎಲ್‌ ಬಳಿ ರಾಜ್ಯ ಸರ್ಕಾರ ಒದಗಿಸಿದ್ದ ಸುಮಾರು 12,500 ಎಕರೆ ಜಮೀನು ಬಳಕೆಯಾಗುತ್ತಿಲ್ಲ. ಈ ಜಮೀನು ಸೇರಿದಂತೆ ಕೆಲವು ಆಸ್ತಿಗಳನ್ನು ನಗದೀಕರಣ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಆದರೆ, ಕಾರ್ಖಾನೆಯನ್ನು ಪೂರ್ಣವಾಗಿ ಖಾಸಗೀಕರಣ ಮಾಡುತ್ತಿಲ್ಲ’ ಎಂದರು.

ಮೊದಲ ಹಂತದಲ್ಲಿ 3,500 ಎಕರೆ ಜಮೀನನ್ನು ರಾಜ್ಯ ಸರ್ಕಾರ ಮರಳಿ ಪಡೆಯಲಿದೆ. ಉಳಿದ ಜಮೀನುಗಳ ವಾಸ್ತವಿಕ ಸ್ಥಿತಿ ಕುರಿತು ಭೂಮಾಪನ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಉದ್ಯಮ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ADVERTISEMENT

‘ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆ ಖಾಸಗೀಕರಣ ಆಗಬಾರದು’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಮತ್ತು ಗೋವಿಂದರಾಜು ಆಗ್ರಹಿಸಿದರು.

‘ಕೈಗಾರಿಕೆಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ. ಅಗತ್ಯ ಮೂಲ
ಸೌಕರ್ಯ ಮಾತ್ರ ಒದಗಿಸಬಹುದು. ಲಭ್ಯವಿರುವ ಜಮೀನುಗಳಲ್ಲಿ ಖಾಸಗಿಯವರು ಹೊಸ ಕೈಗಾರಿಕೆಗಳನ್ನು ಆರಂಭಿಸಲು ಅನುಕೂಲ ಕಲ್ಪಿಸಲಾಗುವುದು’ ಎಂದು ನಿರಾಣಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.