ADVERTISEMENT

ಮೂರು ತಿಂಗಳಿಂದ ಸಂಬಳವಿಲ್ಲದೆ ಕೆಲಸ!

ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆ ದಿನಗೂಲಿ ನೌಕರರ ಪರದಾಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಜೂನ್ 2019, 20:00 IST
Last Updated 6 ಜೂನ್ 2019, 20:00 IST
   

ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಹಂಪಿ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮನೆ ಬಾಡಿಗೆ, ಮಕ್ಕಳ ಶಾಲೆಯ ಶುಲ್ಕ, ದಿನಸಿ ಖರೀದಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರು ಖಾಸಗಿಯವರ ಬಳಿ ಬಡ್ಡಿ ಸಹಿತ ಸಾಲ ಪಡೆದು ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬಾಕಿ ವೇತನ ಪಾವತಿಸುವಂತೆ ನೌಕರರು ಹಲವು ಸಲ ಮನವಿ ಮಾಡಿಕೊಂಡಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.

ADVERTISEMENT

ಇಲಾಖೆಯಲ್ಲಿ ಒಟ್ಟು 190 ಜನ ದಿನಗೂಲಿ ನೌಕರರಿದ್ದಾರೆ. ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ನೌಕರರು ಮಾಸಿಕ ₹10 ಸಾವಿರ ವೇತನ ಪಡೆಯುತ್ತಿದ್ದಾರೆ. ಕಡಿಮೆ ಸಂಬಳದಲ್ಲಿ ಮನೆ ನಡೆಸುತ್ತಿರುವ ನೌಕರರಿಗೆ ಸಕಾಲಕ್ಕೆ ವೇತನ ಸಿಗದೇ ಇರುವುದರಿಂದ ಅವರ ಬದುಕು ಅತಂತ್ರವಾಗಿದೆ.

ಹಂಪಿ ಪರಿಸರದಲ್ಲಿ ಉದ್ಯಾನ ನಿರ್ವಹಣೆ, ಸ್ಮಾರಕಗಳ ಸುತ್ತಮುತ್ತ ಸ್ವಚ್ಛತೆ, ಉತ್ಖನನ ಸಂದರ್ಭದಲ್ಲಿ ನೆರವಾಗುವುದು, ಸ್ಮಾರಕಗಳ ಜೀರ್ಣೋದ್ಧಾರ ಸೇರಿದಂತೆ ಇತರ ಎಲ್ಲ ಕೆಲಸಕ್ಕೂ ಇದೇ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ. ‘ಸಕಾಲಕ್ಕೆ ಸಂಬಳವೂ ಕೊಡುವುದಿಲ್ಲ. ಅದನ್ನು ಹೆಚ್ಚು ಸಹ ಮಾಡೊಲ್ಲ’ ಎನ್ನುತ್ತಾರೆ ನೌಕರರು.

‘25–30 ವರ್ಷಗಳಿಂದ ಕನಿಷ್ಠ ವೇತನದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ನೌಕರಿ ಕಾಯಂ ಆಗಿಲ್ಲ. ಆಗುವ ಭರವಸೆಯೂ ಇಲ್ಲ. ಸಂಬಳವಾದರೂ ಸಮಯಕ್ಕೆ ಸರಿಯಾಗಿ ಕೊಡಬೇಕು. ಮನೆ ನಡೆಸುವುದು ಕಷ್ಟವಾಗಿದೆ’ ಎಂದು ಹೆಸರು ಬಹಿರಂಪಡಿಸಲು ಇಚ್ಛಿಸದ ನೌಕರರೊಬ್ಬರು ಗೋಳು ತೋಡಿಕೊಂಡರು.

‘ಈ ನೌಕರಿಯೇ ಸಾಕು ಅನಿಸುತ್ತಿದೆ. ಆದರೆ, ಇಂತಹ ಬರಗಾಲದಲ್ಲಿ ಬೇರೆ ನೌಕರಿ ಸಿಗುವುದು ಬಹಳ ಕಷ್ಟ. ನೌಕರಿ ಬಿಟ್ಟರೂ ಕಷ್ಟ. ಬಿಡದಿದ್ದರೂ ಕಷ್ಟ. ಏನು ಮಾಡಬೇಕು ಎನ್ನುವುದು ತೋಚುತ್ತಿಲ್ಲ. ಈ ವರ್ಷ ಸಾಲ ಮಾಡಿ ಈದ್‌ ಮಾಡಿದ್ದೇವೆ. ಹೇಗೋ ಹಬ್ಬ ಮಾಡಿದ್ದೇವೆ. ಮಕ್ಕಳ ಶಾಲೆಗೆ ಶುಲ್ಕ, ಮನೆ ನಡೆಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಸಂಕಷ್ಟ ಹೇಳಿಕೊಂಡರು.

‘ಸಂಬಳ ವಿಳಂಬವಾಗುತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. ಆಗಾಗ ಆಗುತ್ತಲೇ ಇರುತ್ತದೆ. ನೌಕರರಿಗೆ ಎದುರಾಗುತ್ತಿರುವ ಸಮಸ್ಯೆಯನ್ನು ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ’ ಎಂದು ಎ.ಎಸ್‌.ಐ. ಅಧಿಕಾರಿ ಸೋಮ್ಲ ನಾಯ್ಕ ತಿಳಿಸಿದರು.

ಕೇಂದ್ರ ಕಚೇರಿಯಿಂದ ಬಜೆಟ್‌ ಬಂದಿಲ್ಲ. ಬಹುಶಃ ಜುಲೈ ನಂತರವೇ ಬರಬಹುದು. ಈ ಕುರಿತು ಮೇಲಿನವರಿಗೆ ಅನೇಕ ಸಲ ತಿಳಿಸಿದರೂ ಪ್ರಯೋಜನವಾಗಿಲ್ಲ

- ಸೋಮ್ಲ ನಾಯ್ಕ, ಎಎಸ್‌ಐ ಅಧಿಕಾರಿ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.