ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರಂಥಹ ಸಮರ್ಥ ನಾಯಕತ್ವ ಇರುವ ಬಿಜೆಪಿಯನ್ನು ತೊರೆದು ನಾಯಕತ್ವವೇ ಇಲ್ಲದ ಪಕ್ಷಗಳಿಗೆ ಯಾರೂ ಹೋಗುವುದಿಲ್ಲ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರೈಸ್ತ ಧರ್ಮೀಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲದ ಇನ್ನೊಂದು ಪಕ್ಷಕ್ಕೆ ಯಾರು ಹೋಗುತ್ತಾರೆ’ ಎಂದು ಕೇಳಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕಾಂಗ್ರೆಸ್ ಸೇರಿರುವ ಕುರಿತು ಕೇಳಿದಾಗ, ‘ಅವರು ಯಾವುದೋ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿದ್ದರು ಅನಿಸುತ್ತದೆ. ಕೈಗೆಟುಕದ ದ್ರಾಕ್ಷಿ ಹುಳಿ ಎಂಬಂತಾಗಿದೆ ಅವರ ಸ್ಥಿತಿ. ಈಗ ವೈಯಕ್ತಿಕ ಲಾಭಕ್ಕಾಗಿ ಪಕ್ಷಾಂತರ ಮಾಡಿರಬಹುದು. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಎನ್ನುವುದನ್ನು ಮರೆಯಬಾರದು’ ಎಂದರು.
ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ನರೇಂದ್ರ ಮೋದಿಯವರ ಕೊಡುಗೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಯೋಜನೆ ಬಗ್ಗೆ ಕನಸು ಕಂಡಿದ್ದರು. ಆದರೆ, ನನಸಾಗಿರಲಿಲ್ಲ. ಶಂಕುಸ್ಥಾಪನೆಗೆ ಹಾಕಿದ್ದ ಕಲ್ಲುಗಳೇ ಮಾಯವಾಗುವ ಕಾಲವಿತ್ತು. ಆದರೆ, 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ಯೋಜನೆ ಈಗ ಮುಕ್ತಾಯವಾಗಿದೆ ಎಂದು ಹೇಳಿದರು.
ಈ ಯೋಜನೆಯಿಂದ ಬೆಂಗಳೂರು ಮತ್ತು ಮೈಸೂರು ನಗರಗಳು ಹೆಚ್ಚು ಅಭಿವೃದ್ಧಿ ಹೊಂದಲಿವೆ. ಪಕ್ಷದ ಶಾಸಕರು ಇಲ್ಲದ ಪ್ರದೇಶಗಳಿಗೂ ಬಿಜೆಪಿ ಸರ್ಕಾರ ತಾರತಮ್ಯ ಮಾಡದೇ ಯೋಜನೆಗಳನ್ನು ನೀಡುತ್ತದೆ ಎಂಬುದಕ್ಕೆ ಇದಕ್ಕೆ ಸಾಕ್ಷಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.