ಬಳ್ಳಾರಿ: ಜೈಲಿಗೆ ಹೋಗಿ ಬರುವ ಭ್ರಷ್ಟರಿಗೆ ಭವ್ಯ ಸ್ವಾಗತ ನೀಡುವ ಪರಿಪಾಠ ಸಮಾಜದಲ್ಲಿ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದುಲೋಕಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ಹೆಗ್ಡೆ ಅಭಿಪ್ರಾಯಪಟ್ಟರು.
ನಗರದ ಮೇರಿ ಮಾತಾ ಚರ್ಚ್ ನಲ್ಲಿ ಕೆಥೊಲಿಕ್ ಯುವ ಜನ ಪರಿಷತ್ ಏರ್ಪಡಿಸಿರುವ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಅವರು, ಭ್ರಷ್ಟ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಸಮಾಜದ ನಿಲುವು ಬದಲಾಗಬೇಕು ಎಂದರು.
ಜನರಚಿಂತನೆಗಳಲ್ಲಿ ಬದಲಾವಣೆ ಬರಬೇಕು. ಜನರಲ್ಲಿ ದುರಾಸೆ ಹೆಚ್ಚಾಗಿದೆ. ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಲಿಷ್ಠ ಲೋಕಪಾಲ ಮಸೂದೆ ಯಾರಿಗೂ ಬೇಕಾಗಿಲ್ಲ. ಲೋಕಾಯುಕ್ತ ಕೂಡ ದುರ್ಬಲವಾಗಿದೆ. ಸಚಿವರ ಆದೇಶದಂತೆ ಕೆಲಸ ಮಾಡುವ ಭ್ರಷ್ಟಾಚಾರ ನಿಗ್ರಹ ದಳ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಭಾಷಣದ ವೇಳೆ ಸುಸ್ತಾಗಿ ಕೆಲಹೊತ್ತು ಕುಳಿತುಕೊಂಡ ಅವರು ಮತ್ತೆ ಭಾಷಣ ಮುಂದುವರೆಸಿದರು. ಯಾವುದೇ ತೊಂದರೆ ಇಲ್ಲವೆಂದು ಸ್ಪಷ್ಟನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.