ADVERTISEMENT

ಇನ್ನೂ 10 ರಿಂದ 15 ವರ್ಷಗಳ ಕಾಲ ಕೆಲಸ ಮಾಡುವ ಶಕ್ತಿ ನನಗಿದೆ ಎಂದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 13:57 IST
Last Updated 25 ಜುಲೈ 2021, 13:57 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ‘ಬಿಜೆಪಿ ಹೈಕಮಾಂಡ್‌ನಿಂದ ಈವರೆಗೂ ತಮಗೆ ಯಾವುದೇ ಸಂದೇಶ ಬಂದಿಲ್ಲ’ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಬೆಳಗಾವಿ ಜಿಲ್ಲಾ ಪ್ರವಾಸ ಮುಗಿಸಿ ಭಾನುವಾರ ಸಂಜೆ ಬೆಂಗಳೂರಿಗೆ ಹಿಂದಿರುಗಿದ ಬಳಿಕ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ʼಇವತ್ತು ರಾತ್ರಿ ಅಥವಾ ಸೋಮವಾರ ಬೆಳಿಗ್ಗೆ ಸಂದೇಶ ಬರಬಹುದು. ಸಂದೇಶ ಬಂದ ಬಳಿಕ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವೆ. ಅಧಿಕಾರದಲ್ಲಿ ಮುಂದುವರಿಯಿರಿ ಎಂದರೆ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿಕೊಂಡು ಹೋಗುವೆ. ರಾಜೀನಾಮೆಗೆ ಸೂಚಿಸಿದರೆ ತಕ್ಷಣವೇ ಹುದ್ದೆಯಿಂದ ಕೆಳಗೆ ಇಳಿಯುತ್ತೇನೆʼ ಎಂದರು.

ʼಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಕ್ಷಣದವರೆಗೂ ಕೆಲಸ ಮುಂದುವರಿಸುತ್ತೇನೆ. ಸೋಮವಾರಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿವೆ. ಈ ಸಂಬಂಧ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ನಮ್ಮ ಸರ್ಕಾರದ ಸಾಧನೆಗಳ ಕುರಿತು ಮಾತನಾಡುತ್ತೇನೆ. ನಂತರ ಉಳಿದ ಸಂಗತಿಗಳು ನಿಮಗೆ ಗೊತ್ತಾಗುತ್ತವೆʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಮಳೆ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವ ಕುರಿತು ಸೋಮವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪಕ್ಷಕ್ಕಾಗಿ ಇನ್ನೂ 10 ರಿಂದ 15 ವರ್ಷಗಳ ಕಾಲ ಕೆಲಸ ಮಾಡುವ ಶಕ್ತಿ ತಮಗಿದೆ. ಪಕ್ಷ ಸಂಘಟನೆಗಾಗಿ ಸಂಪೂರ್ಣ ಶ್ರಮ ಹಾಕಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.