ಬೆಂಗಳೂರು: ಯಕ್ಷಗಾನದ ಹಿರಿಯ ಕಲಾವಿದ, ಮದ್ದಳೆಯ ಮಾಂತ್ರಿಕರೆಂದೇ ಖ್ಯಾತರಾದ ಹಿರಿಯಡ್ಕ ಗೋಪಾಲ್ ರಾವ್ (101) ಇಲ್ಲಿನ ಸ್ವಗೃಹ ಒಂತಿಬೆಟ್ಟುವಿನಲ್ಲಿ ಶನಿವಾರ ನಿಧನರಾದರು. ಮೃತರಿಗೆ ಒಬ್ಬ ಪುತ್ರ ಇದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಹಿರಿಯಡ್ಕದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೋಪಾಲರಾವ್ 1919, ಡಿ.15ರಂದು ಉಡುಪಿ ತಾಲ್ಲೂಕಿನ ಹಿರಿಯಡ್ಕದಲ್ಲಿ ಜನಿಸಿದರು. ಹಿರಿಯಡ್ಕ ಮೇಳದಲ್ಲಿ ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಯಕ್ಷಗಾನದ ಬಡಗುತಿಟ್ಟಿನಲ್ಲಿ ಏರು ಮದ್ದಳೆ ಬಾರಿಸುವುದರಲ್ಲಿ ಅವರು ನಿಷ್ಣಾತರು. ಹಿರಿಯ ಭಾಗವತರಾದ ಶೇಷಗಿರಿ ರಾವ್ ಅವರ ಭಾಗವತಿಗೆ ಮದ್ದಳೆ ಬಾರಿಸುತ್ತಿದ್ದ ಪರಿ ಇಂದಿಗೂ ಮರೆಯುವಂತಿಲ್ಲ ಎನ್ನುತ್ತಾರೆ ರಾಯರ ಅಭಿಮಾನಿಗಳು.
ಪೆರ್ಡೂರು ಹಾಗೂ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಶಿವರಾಮ ಕಾರಂತರ ಒಡನಾಡಿಯಾಗಿಯೂ ಗುರುತಿಸಿಕೊಂಡಿದ್ದರು. 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ,ಜಾನಪದಅಕಾಡೆಮಿಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.
ಇದನ್ನೂ ಓದಿ:ಹಿರಿಯಡಕ ಗೋಪಾಲ್ ರಾವ್ಗೆ ಕಾರಂತ ಪುರಸ್ಕಾರ
ಹಿರಿಯಡ್ಕ ಗೋಪಾಲರಾವ್ ಅವರ ಕುರಿತು ಡಾ.ಕೆ.ಎಂ.ರಾಘವ ನಂಬಿಯಾರ್ ಅವರು ‘ರಂಗ ವಿದ್ಯೆಯ ಹೊಲಬು’ ಪುಸ್ತಕವನ್ನು ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.