ಬೆಂಗಳೂರು: ‘ನೂತನ ಪಿಂಚಣಿ ನೀತಿ (ಎನ್ಪಿಎಸ್) ವ್ಯಾಪ್ತಿಯಲ್ಲಿರುವ ನೌಕರರ ಸಮಸ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಕಡೆಗಣಿಸಿದ್ದಾರೆ. ಈ ನೌಕರರ ಸಮಸ್ಯೆ ಪರಿಹಾರಕ್ಕೆ ಸಂಘದಿಂದ ಪ್ರಯತ್ನವೇ ನಡೆದಿಲ್ಲ’ ಎಂದು ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎನ್.ಇ. ನಟರಾಜ್ ದೂರಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ‘ಎನ್ಪಿಎಸ್ ನೌಕರರ ಸಮಸ್ಯೆ ಪರಿಹಾರದ ಕುರಿತು ಸಂಘದ ಅಧ್ಯಕ್ಷರು ಒಂದು ದಿನವೂ ರಾಜ್ಯ ಸರ್ಕಾರದ ಜತೆ ಚರ್ಚಿಸಿಲ್ಲ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಷಡಾಕ್ಷರಿ ಮುಖ್ಯಮಂತ್ರಿಯವರ ಸಹಾಯಕರಾಗಿದ್ದರು. ಆಗಲೂ ನೌಕರರ ಪರ ಧ್ವನಿ ಎತ್ತಿಲ್ಲ’ ಎಂದರು.
ಷಡಾಕ್ಷರಿ ಅವರ ಅವಧಿಯಲ್ಲಿ ಒಂದೆರಡು ಸಣ್ಣ ಕೆಲಸಗಳಾಗಿವೆ. ಉಳಿದಂತೆ ನೌಕರರ ಯಾವುದೇ ಬೇಡಿಕೆಗಳು ಈಡೇರಿಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನೌಕರರಿಗೆ ನ್ಯಾಯ ದೊರಕಿಸುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿದರು.
ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ ಮಾತನಾಡಿ, ‘ನೌಕರರ ಸಂಘದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಅಧ್ಯಕ್ಷರಿಗೆ ಇತರರ ಮಾತುಗಳನ್ನು ಕೇಳಿಸಿಕೊಳ್ಳುವ ಸಂಯಮ ಇಲ್ಲ. ಸಂಘದ ಇತರ ಪದಾಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.