ADVERTISEMENT

KRS ಥೀಮ್‌ ಪಾರ್ಕ್‌ ಟೆಂಡರ್‌ಗೆ ಆಕ್ಷೇಪ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:43 IST
Last Updated 20 ಮೇ 2025, 15:43 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೆಆರ್‌ಎಸ್‌ ಅಣೆಕಟ್ಟೆ ಸುತ್ತಮುತ್ತಲ ಪ್ರದೇಶದ 198 ಎಕರೆ ಕೃಷಿ ಜಮೀನು ವಶಪಡಿಸಿಕೊಂಡು, ಅಲ್ಲಿ ₹2,615 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ (ಮನೋರಂಜನೆ ಉದ್ಯಾನ) ನಿರ್ಮಿಸುವ ಉದ್ದೇಶದಿಂದ ಕರೆಯಲಾಗಿರುವ ಟೆಂಡರ್‌ ಅಧಿಸೂಚನೆ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಟೆಂಡರ್‌ ಪ್ರಶ್ನಿಸಿ ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಕೃಷಿಕ ಕೆ.ಬೋರಯ್ಯ ಸೇರಿದಂತೆ ಒಟ್ಟು ಐವರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್‌ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಶಿವಪ್ರಕಾಶ್‌, ‘ಉದ್ದೇಶಿತ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ ನಿರ್ಮಾಣದಿಂದ ರಾಜ್ಯದ ಪ್ರತಿಷ್ಠೆಯ ಸಂಕೇತವಾಗಿರುವ ಮತ್ತು ಕೋಟ್ಯಂತರ ರೈತರ ಜೀವನಾಡಿಯಾದ ಕೆಆರ್‌ಎಸ್‌ ಅಣೆಕಟ್ಟೆಗೆ ಧಕ್ಕೆ ಉಂಟಾಗಲಿದೆ. ಹಾಗಾಗಿ, ಕೋರ್ಟ್‌ ನೀಡುವ ಮುಂದಿನ ಆದೇಶದವರೆಗೆ ಟೆಂಡರ್‌ ಅಧಿಸೂಚನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಟೆಂಡರ್‌ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಯ ರೂಪುರೇಷೆಗಳೇನು ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ಕೋರ್ಟ್‌ಗೆ ವಿಶದಪಡಿಸಿ’ ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ನಿರ್ದೇಶಿಸಿತು. ಅಂತೆಯೇ, ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ಅಣೆಕಟ್ಟೆ ಸುರಕ್ಷಾ ಪ್ರಾಧಿಕಾರದ ಅಧ್ಯಕ್ಷ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಒಟ್ಟು 17 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಜೂನ್‌ 9ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ಉದ್ದೇಶಿತ ಮನೋರಂಜನಾ ಪಾರ್ಕ್‌ನಿಂದ ಕೆಆರ್‌ಎಸ್‌ ಅಣೆಕಟ್ಟೆಯ ಸುರಕ್ಷತೆಗೆ ತೀವ್ರ ಧಕ್ಕೆ ಉಂಟಾಗಲಿದೆ. ಸುತ್ತಮುತ್ತಲಿನ ಫಲವತ್ತಾದ 198 ಎಕರೆ ಕೃಷಿ ಜಮೀನನ್ನು ಇದಕ್ಕಾಗಿ ವಶಪಡಿಸಿಕೊಂಡರೆ ಇಲ್ಲಿರುವ ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಗೆ ಇನ್ನಿಲ್ಲದ ಹಾನಿಯಾಗಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ವ್ಯಾಪಕವಾದ ವಾಣಿಜ್ಯ ಚಟುವಟಿಕೆಗಳಿಗೆ ಇಂಬು ನೀಡುವ ಮೂಲಕ ಸುತ್ತಲಿನ ಪರಿಸರದ ಅಸಮತೋಲನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಅರ್ಜಿದಾರರು ಟೆಂಡರ್‌ ಪ್ರಕ್ರಿಯೆಯನ್ನು ಬಲವಾಗಿ ಆಕ್ಷೇಪಿಸಿದ್ದಾರೆ.

‘ಈ ಟೆಂಡರ್ ಘೋಷಣೆ ಏಕಪಕ್ಷೀಯವಾಗಿದೆ. ರಾಜ್ಯ ಸರ್ಕಾರ ರಾಷ್ಟ್ರೀಯ ಅಣೆಕಟ್ಟೆ ಸುರಕ್ಷಾ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆದಿರುವುದಿಲ್ಲ. ಈ ಪಾರ್ಕ್‌ ನಿರ್ಮಾಣದಿಂದ ಆಗಲಿರುವ ಲಾಭ–ನಷ್ಟಗಳನ್ನು ಸಾರ್ವಜನಿಕರ ಅವಗಾಹನೆಗೂ ತಂದಿರುವುದಿಲ್ಲ. ಇದೇ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಬಿ.ವರಾಳೆ ಮತ್ತು ಕೃಷ್ಣ ಎಸ್‌.ದೀಕ್ಷಿತ್‌ ಅವರ ವಿಭಾಗೀಯ ನ್ಯಾಯಪೀಠದ ಆದೇಶವನ್ನು ರಾಜ್ಯ ಸರ್ಕಾರ ಮತ್ತು ನೀರಾವರಿ ನಿಗಮವು ಸ್ಪಷ್ಟವಾಗಿ ಉಲ್ಲಂಘಿಸಿದೆ’ ಎಂದು ಆರೋಪಿಸಿದ್ದಾರೆ.

ಅಭಿವೃದ್ಧಿ ಹೆಸರಲ್ಲಿ ವಾಣಿಜ್ಯ ಚಟುವಟಿಕೆ
  ‘ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ (ಮನೋರಂಜನೆ ಉದ್ಯಾನ) ನಿರ್ಮಾಣದ ಉದ್ದೇಶಕ್ಕಾಗಿ 2024ರ ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಎರಡು ಬಾರಿ ಟೆಂಡರ್‌ ಆಹ್ವಾನಿಸಿತ್ತು. ಆದರೆ ಇದಕ್ಕೆ ರೈತ ಸಂಘ ಮತ್ತು ಸ್ಥಳೀಯ ಕೃಷಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈಗ ಕೆಆರ್‌ಎಸ್‌ ಅಣೆಕಟ್ಟೆ ಅಧೀನದಲ್ಲಿರುವ ಕಾವೇರಿ ಬೃಂದಾವನ ಉದ್ಯಾನವನದ ಅಭಿವೃದ್ಧಿ ಉಸ್ತುವಾರಿ ಯಾ ನಿರ್ವಹಣೆ ಹೆಸರಿನಲ್ಲಿ 2025ರ ಮಾರ್ಚ್ 15ರಂದು ₹2615.96 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.  ಮನವಿ ಏನು?: ‘ಮಂಡ್ಯ ಜಿಲ್ಲೆ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಅವರು 2024ರ ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿಯವರಿಗೆ ನೀಡಿರುವ ಮನವಿಯ ಅನುಸಾರ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.