ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿರುವ ಕೆಲ ನ್ಯೂನತೆಗಳನ್ನು ಸರಿಪಡಿಸಬೇಕು ಹಾಗೂ ನವರಾತ್ರಿ ಕಾರಣ ಸಮೀಕ್ಷೆಯನ್ನು ಮುಂದೂಡಬೇಕು ಎಂದು ಒಕ್ಕಲಿಗ ಸಮುದಾಯ ಆಗ್ರಹಿಸಿದೆ.
ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಇಲ್ಲಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಒಕ್ಕಲಿಗ ಸಮುದಾಯದ ಸಭೆ ನಡೆಯಿತು. ಸ್ವಾಮೀಜಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು, ಒಕ್ಕಲಿಗರ ಸಂಘದ ಪದಾಧಿಕಾರಿಗಳು ಪಾಲ್ಗೊಂಡು, ಸಾಧಕ -ಬಾಧಕಗಳ ಬಗ್ಗೆ ಚರ್ಚಿಸಿದರು.
ಸಮೀಕ್ಷೆ ವೇಳೆ ಒಕ್ಕಲಿಗ ಸಮುದಾಯದವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ಒಕ್ಕಲಿಗ’ ಎಂದೇ ಬರೆಯಿಸಬೇಕು. ಅನಿವಾರ್ಯ ಇದ್ದರೆ ಮಾತ್ರ ಉಪಜಾತಿಯ ಬಗ್ಗೆ ಬರೆಯಿಸಬಹುದು. ಇಲ್ಲವಾದರೆ ಬಿಡಬಹುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆ ಬಳಿಕ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ‘3.5 ಕೋಟಿ ಜನಸಂಖ್ಯೆ ಇರುವ ತೆಲಂಗಾಣದಲ್ಲಿ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಗೆ 65 ದಿನ ತೆಗೆದುಕೊಂಡಿದ್ದರು. ಒಳ ಮೀಸಲಾತಿ ಕುರಿತ ವರದಿ ನೀಡಲು ನಾಗಮೋಹನದಾಸ್ ಆಯೋಗ 45 ದಿನ ತೆಗೆದುಕೊಂಡಿತ್ತು. ರಾಜ್ಯದಲ್ಲಿ ಸಾಲು ಸಾಲು ಹಬ್ಬಗಳು ಇವೆ. ರಜೆಯ ಕಾರಣ ಹಲವರು ಪ್ರವಾಸ ಹೋಗಿರುತ್ತಾರೆ. ಏಳು ಕೋಟಿ ಜನಸಂಖ್ಯೆಯ ರಾಜ್ಯದಲ್ಲಿ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವೇ? ಸಮೀಕ್ಷೆಯಲ್ಲಿರುವ ಕೆಲ ಲೋಪಗಳನ್ನು ಸರಿಪಡಿಸುವಂತೆ ಸಮುದಾಯವನ್ನು ಪ್ರತಿನಿಧಿಸುವ ಸಚಿವರ ಮೂಲಕ ಸರ್ಕಾರಕ್ಕೆ ಗಮನಕ್ಕೆ ತರಲಾಗಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರವು ಜನವರಿಯಲ್ಲಿ ಜಾತಿಗಣತಿ, ಜನಗಣತಿ ನಡೆಸಿದ ಬಳಿಕ ವರದಿ ಬಿಡುಗಡೆ ಮಾಡಲಿದೆ. ಹಾಗಾಗಿ ರಾಜ್ಯ ಸರ್ಕಾರ ಕೇವಲ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಬಗ್ಗೆ ವರದಿ ಮಾಡಲಿ. ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಸೇರಿಸಿ ಗೊಂದಲ ಉಂಟು ಮಾಡಲಾಗಿದೆ. ಆಯೋಗ ಸ್ವಾಯತ್ತ ಸಂಸ್ಥೆ ಇರಬಹುದು. ಗೊಂದಲಗಳ ಬಗ್ಗೆ ಚರ್ಚಿಸಿ, ಬಗೆಹರಿಸಬೇಕು. ಧರ್ಮದ ಹೆಸರಿನಲ್ಲಿ ಸಮುದಾಯ ಒಡೆಯಬಾರದು’ ಎಂದು ಸ್ವಾಮೀಜಿ ಹೇಳಿದರು.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ‘ಕೆಳಮಟ್ಟದಲ್ಲಿರುವ ಅನಕ್ಷರಸ್ಥ ಸಮುದಾಯಕ್ಕೆ ಸಮೀಕ್ಷೆ ಬಗ್ಗೆ ಅರಿವು ಮೂಡಿಸಬೇಕು. ಹದಿನೈದು ದಿನದಲ್ಲಿ ಸಮೀಕ್ಷೆ ನಡೆಸಲು ಆಗುವುದಿಲ್ಲ. ಕನಿಷ್ಠ 45 ದಿನಗಳಾದರೂ ಗಣತಿದಾರರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಗಣತಿದಾರರು ಗೊಂದಲ ಮಾಡಿಕೊಂಡು, ಯಾವುದೋ ಕಾಲಂನಲ್ಲಿ ಏನೋ ನಮೂದಿಸಿ, ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇರುತ್ತದೆ’ ಎಂದು ತಿಳಿಸಿದರು.
–––
ಈಗ ಬೆಳೆ ಕಟಾವಿಗೆ ಬಂದಿದ್ದು ಪಿತೃಪಕ್ಷ ಆಚರಿಸುತ್ತಾರೆ. ಸಾವಿರಾರು ಆಕ್ಷೇಪಣೆ ಸಲ್ಲಿಕೆಯಾಗಿದ್ದರೂ ಆಯೋಗ ಉತ್ತರಿಸಿಲ್ಲ. ಸರ್ಕಾರ ಮಧ್ಯೆ ಪ್ರವೇಶಿಸಿ ಭಾವನೆಗಳಿಗೆ ಧಕ್ಕೆ ಬಾರದಂತೆ ಪರಿಹಾರ ಕಂಡುಕೊಂಡು ಸಮೀಕ್ಷೆ ನಡೆಸಬೇಕು.
–ನಂಜಾವಾಧೂತ ಸ್ವಾಮೀಜಿ ಸ್ಫಟಿಕಪುರಿ ಮಠ
ತರಾತುರಿಯಲ್ಲಿ ಸಮೀಕ್ಷೆ ಮಾಡಿದರೆ ಅಂಕಿ ಅಂಶ ಹಾಗೂ ಜಾತಿ ಜಾತಿಗಳ ನಡುವೆ ಸಮಸ್ಯೆ ಉಂಟಾಗಬಹುದು. ಕನಿಷ್ಠ 60 ದಿನಗಳ ಮಟ್ಟಿಗೆ ಸಮೀಕ್ಷೆ ಮುಂದೂಡುವಂತೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.
–ನಿಶ್ಚಲಾನಂದನಾಥ ಸ್ವಾಮೀಜಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಕೆಂಗೇರಿ
ಸಮುದಾಯಕ್ಕೆ ಮಾರ್ಗದರ್ಶನ
ಸಂಘದ ವತಿಯಿಂದ ಮಠಾಧೀಶರು ಮುಖಂಡರು ಹಳ್ಳಿ ನಗರ ಪಟ್ಟಣಗಳಿಗೆ ತೆರಳಿ ಸಮುದಾಯದ ಜನರಿಗೆ ಫಾರಂ ಹೇಗೆ ಭರ್ತಿ ಮಾಡಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವರು. ಈಗಾಗಲೇ ಸಂಘದ ಎರಡು ಸಾವಿರ ನೌಕರರನ್ನು ತಾಲ್ಲೂಕು ಕೇಂದ್ರಗಳಿಗೆ ನಿಯೋಜಿಸಿದ್ದು ಅವರು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಹೇಳಿದರು. ಜಾತಿಯ ಪಟ್ಟಿಯಲ್ಲಿ ಹೊಸ ಜಾತಿಗಳ ಸೇರ್ಪಡೆ ಹಾಗೂ ಹಿಂದೂ ಜಾತಿಗಳ ಹೆಸರಿನ ಜೊತೆಗೆ ಕ್ರಿಶ್ಚಿಯನ್ ಪದ ಉಲ್ಲೇಖಿಸಿ ಗೊಂದಲ ಉಂಟು ಮಾಡಲಾಗಿದೆ. ಎಲ್ಲಾ ಸಮುದಾಯಕ್ಕೂ ಸರ್ಕಾರ ನ್ಯಾಯ ಕೊಡಿಸಬೇಕು ಎಂದರು.
ಎಚ್ಡಿಕೆ–ಡಿಕೆಶಿ ಹಸ್ತಲಾಘವ
ನಿರ್ಮಲಾನಂದನಾಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ರಾಜಕೀಯ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಪರಸ್ಪರ ಹಸ್ತಲಾಘವ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರಾದ ಎಂ.ಸಿ. ಸುಧಾಕರ್ ಎನ್.ಚಲುವರಾಯಸ್ವಾಮಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಶಾಸಕ ಸಿ.ಎನ್. ಅಶ್ವತ್ಥನಾರಾಯಣ ಸಂಸದ ಕೆ.ಸುಧಾಕರ್ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.