ಬೆಂಗಳೂರು: ‘ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇನೆ. ಸರ್ಕಾರದ ವಿರುದ್ಧ ಆಯೋಗ ದೂರು ದಾಖಲಿಸಿಕೊಂಡಿದೆ’ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಆಂಬುಲೆನ್ಸ್ ಇಲ್ಲದೆ ಸೋಂಕಿತರು ಎರಡು ದಿನ ನರಳಾಡಿ ಸಾವಿಗೀಡಾದ ಘಟನೆಗಳು ನಡೆದಿವೆ. ಅಂತ್ಯಸಂಸ್ಕಾರದಲ್ಲೂ ಸರಿಯಾಗಿ ನಡೆದುಕೊಂಡಿಲ್ಲ. ಶವಗಳನ್ನು ಮನಸ್ಸಿಗೆ ಬಂದಂತೆ ಎಸೆದಿದ್ದಾರೆ. ಇದೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆ. ಹೀಗಾಗಿ, ಆಯೋಗ ದೂರು ದಾಖಲು ಮಾಡಿಕೊಂಡಿದೆ’ ಎಂದರು.
‘ಆಗಸ್ಟ್ 3ರಂದು ಹಾಜರಾಗಲು ನನಗೆ ಆಯೋಗ ತಿಳಿಸಿದೆ. ಅಂದು ಆಯೋಗದ ಎದುರು ಹಾಜರಾಗಿ ನಮ್ಮಲ್ಲಿರುವ ದಾಖಲೆಗಳನ್ನು ಸಲ್ಲಿಸುತ್ತೇನೆ. ಸಂಪೂರ್ಣ ವಿವರಗಳನ್ನೂ ಆಯೋಗಕ್ಕೆ ನೀಡುತ್ತೇನೆ’ ಎಂದರು
ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಲೀಗಲ್ ನೋಟಿಸ್ ಕಳುಹಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ನಾಯಕರನ್ನು ಕಟ್ಟಿ ಹಾಕುವಂಥ ಪ್ರಮೇಯವೇ ಇಲ್ಲ. ನೋಟಿಸ್ ಕೊಟ್ಟು ಅಂಜಿಸುವ ಪ್ರಯತ್ನ ನಡೆಯಲ್ಲ. ಅಂಥ ಪ್ರಯತ್ನಕ್ಕೆ ನಾವು ಹೆದರುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.