ADVERTISEMENT

ಕೊರೊನಾ: ಸಾಮಗ್ರಿಗಳ ಖರೀದಿ ಲೆಕ್ಕ ಕೇಳಿದ ಸಿದ್ದರಾಮಯ್ಯ

ಮುಖ್ಯ ಕಾರ್ಯದರ್ಶಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 11:30 IST
Last Updated 15 ಜುಲೈ 2020, 11:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಸರ್ಕಾರ ಮಾಡಿರುವ ಖರ್ಚು ವೆಚ್ಚಗಳ ಪ್ರತಿ ಪೈಸೆ ಲೆಕ್ಕವನ್ನು ಹಾಗೂ ಖರೀದಿಸಿದ ಸಾಮಗ್ರಿಗಳ ವಿವರವನ್ನು ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

’ನಾನು ಬರೆದ ಪತ್ರಗಳಿಗೆ ರಾಜ್ಯ ಸರ್ಕಾರ ಸಮರ್ಪಕ ಉತ್ತರ ನೀಡುತ್ತಿಲ್ಲ. ಸರ್ಕಾರದ ಈ ವರ್ತನೆಯು ವಿರೋಧ ಪಕ್ಷದ ನಾಯಕರಿಗೆ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಹಕ್ಕುಚ್ಯುತಿಯಂತೆ ತೋರುತ್ತಿದೆ‘ ಎಂದು ಅವರು ದೂರಿದ್ದಾರೆ. ಪತ್ರ ತಲುಪಿದ ಮೂರು ದಿನಗಳಲ್ಲಿ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ಇದೇ 16ರ ಸಂಜೆ 5ರೊಳಗೆ ಸಿದ್ದರಾಮಯ್ಯ ಅವರಿಗೆ ನೀಡಬೇಕು ಎಂದು ಇಲಾಖೆಗಳ ಮುಖ್ಯಸ್ಥರಿಗೆ ವಿಜಯಭಾಸ್ಕರ್‌ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಕೋರಿರುವ ಮಾಹಿತಿಗಳು

ADVERTISEMENT

*ಇಲಾಖೆಗಳು ಎಷ್ಟು ‍ಪ್ರಮಾಣದ ಸಾಮಗ್ರಿಗಳನ್ನು ಖರೀದಿಸಿವೆ? ಎಷ್ಟು ಬೆಲೆ ನೀಡಿವೆ?

*ಬಿಡ್‌ನಲ್ಲಿ ಭಾಗವಹಿಸಿದ ಸಂಸ್ಥೆಗಳೆಷ್ಟು? ಯಾವ ಸಂಸ್ಥೆಗೆ ಬಿಡ್‌ ನೀಡಲಾಗಿದೆ?

*ಹೆಚ್ಚಿನ ದರ ಕೋಟ್‌ ಮಾಡಿದ ಕಂಪನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣವೇನು?

*ಕಂಪನಿ ಸರಬರಾಜು ಮಾಡಿರುವ ಉತ್ಪನ್ನಗಳ ಪ್ರಮಾಣವೆಷ್ಟು? ಗುಣಮಟ್ಟ ಸರಿ ಇಲ್ಲ ಎಂದು ತಿರಸ್ಕರಿಸಿದ ಸಾಮಗ್ರಿಗಳು ಯಾವುವು? ಕಳಪೆ ಸಾಮಗ್ರಿಗಳನ್ನು ಸರಬರಾಜು ಮಾಡಿದ ಕಂಪನಿ ಯಾವುದು? ಗುಣಮಟ್ಟಗಳ ಕುರಿತು ತಕರಾರು ಇದ್ದರೂ ಪಾವತಿ ಮಾಡಿರುವ ಹಣವೆಷ್ಟು?

*ಕೇಂದ್ರ ಸರ್ಕಾರವು ಸರಬರಾಜು ಮಾಡಿದ ಸಾಮಗ್ರಿಗಳು ಕಳಪೆಯಾಗಿವೆ ಎಂದು ಬಂದ ದೂರುಗಳೆಷ್ಟು? ಕೈಗೊಂಡ ಕ್ರಮಗಳೇನು?

*ಕೇಂದ್ರ ಹಾಗೂ ರಾಜ್ಯ ಸರ್ಕಾರ ಖರೀದಿಸಿದ ಸಾಮಗ್ರಿಗಳನ್ನು ಎಲ್ಲೆಲ್ಲಿ ಹಂಚಿಕೆ ಮಾಡಲಾಗಿದೆ?

*ಆಹಾರ, ಆಹಾರ ಧಾನ್ಯಗಳ ಕಿಟ್‌ಗಳು, ಹಾಲು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ? ಆಹಾರ ತಯಾರಿಸಿದ ಸಂಸ್ಥೆಗೆ ಬಿಡುಗಡೆ ಮಾಡಿರುವ ಹಣವೆಷ್ಟು?

*ಪ್ರತಿ ಕ್ವಾರಂಟೈನ್‌ ಕೇಂದ್ರಕ್ಕೆ ಇದುವರೆಗೆ ಎಷ್ಟು ಖರ್ಚು ಮಾಡಲಾಗಿದೆ? ಎಷ್ಟು ಕ್ವಾರಂಟೈನ್‌ ಕೇಂದ್ರಗಳನ್ನು ನಿರ್ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.