ಧಾರವಾಡ: ‘ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾದ 126 ಆರೋಪಿಗಳಿಗೆ ಶಾಸಕ ಜಮೀರ್ ಅಹಮದ್ ಅವರು ನೆರವು ನೀಡುವ ಮೂಲಕ ಗಲಭೆಗೆ ಪ್ರೋತ್ಸಾಹಿಸುತ್ತಿದ್ದು, ಇವರನ್ನೂ ಬಂಧಿಸಬೇಕು’ ಎಂದು ಶಾಸಕ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ ಒತ್ತಾಯಿಸಿದರು.
‘ವೈದ್ಯರು, ನರ್ಸ್, ಪೊಲೀಸರು, ಆಶಾಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವವರಿಗೆ ಆರ್ಥಿಕ ನೆರವು ನೀಡುವ ಹಾಗೂ ಸನ್ಮಾನಿಸುವ ಮೂಲಕ ಆರೋಪಿಗಳಿಗೆ ದೇಶದ್ರೋಹಿಗಳನ್ನು ಬೆಂಬಲಿಸಿದ್ದಾರೆ. ಅವರಿಗೆಪಾಪಪ್ರಜ್ಞೆ ಕಾಡದಂತೆ ಮಾಡಿರುವುದು ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ಕೊಟ್ಟಂತಾಗಲಿದೆ. ಸಮಾಜಕ್ಕೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷಕ್ಕೂ ಜಮೀರ್ ನಡೆ ಮುಜುಗರ ಉಂಟು ಮಾಡಿರುವುದರಲ್ಲಿ ಎರಡು ಮಾತಿಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕಾನೂನು ಮೀರಿ ವರ್ತಿಸಿದ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಜಮೀರ್ ವಿರುದ್ಧ ಕ್ರಮ ಕೈಗೊಂಡರೆ ಕಾಂಗ್ರೆಸ್ ಪಕ್ಷದ ನಾಯಕರೂ ಮಧ್ಯಪ್ರವೇಶಿಸರು ಎಂಬ ನಂಬಿಕೆ ನನಗಿದೆ. ಹೀಗಾಗಿ ಇವರ ವಿರದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಬಂಧಿಸಬೇಕು’ ಎಂದು ಬೆಲ್ಲದ ಒತ್ತಾಯಿಸಿದರು.
ಮದ್ಯ ಮಾರಾಟ ನಿಷೇಧ ಕುರಿತ ಒತ್ತಾಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮದ್ಯಕ್ಕೆ ಪರ್ಯಾಯ ಆದಾಯ ಮೂಲದ ಕುರಿತು ಚರ್ಚೆ ನಡೆಯುತ್ತಿದೆ. ಸೂಕ್ತ ದಾಖಲೆ ಸಹಿತ ಮದ್ಯ ನಿಷೇಧ ಜಾರಿಗೆ ಸರ್ಕಾರಕ್ಕೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.