ADVERTISEMENT

ಕರಾವಳಿ ಜಿಲ್ಲೆಗಳಲ್ಲಿ ತಾಳೆ ಎಣ್ಣೆ ಸಂಸ್ಕರಣಾ ಘಟಕ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 6:40 IST
Last Updated 5 ಮಾರ್ಚ್ 2023, 6:40 IST
   

ಕಲಬುರಗಿ: ಪ್ರಸ್ತುತ ದೇಶದ ಒಟ್ಟು ಬೇಡಿಕೆಯ ಶೇ 70ರಷ್ಟು ಬೇಳೆ ಕಾಳು ಹಾಗೂ ಎಣ್ಣೆಕಾಳುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಸ್ವಾವಲಂಬನೆ ಸಾಧಿಸಲು ಕರಾವಳಿ ಜಿಲ್ಲೆಗಳಲ್ಲಿ ತಾಳೆ ಎಣ್ಣೆ ಸಂಸ್ಕರಣಾ ‌ಘಟಕ ಆರಂಭಿಸಲು ಕ್ಯಾಂಪ್ಕೊಗೆ ಸೂಚಿಸಲಾಗಿದೆ‌ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೋ ಅಲ್ಲಿ ತಾಳೆ ಮರಗಳನ್ನು ಬೆಳೆಸಲು ಅನುಕೂಲಕರ ವಾತಾವರಣ ಇರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಎಣ್ಣೆ ಬೀಜಗಳನ್ನು ಒದಗಿಸಲಾಗುತ್ತದೆ. ರೈತ ಉತ್ಪಾದಕ ಸಂಘ (ಎಫ್ ಪಿಒ)ಗಳನ್ನು ನೋಂದಣಿ ಮಾಡಿಕೊಂಡವರಿಗೆ ಸಂಸ್ಕರಣಾ ಘಟಕ, ಕಚೇರಿ ಸ್ಥಾಪಿಸಲು ₹ 18ರಿಂದ ₹ 20 ಲಕ್ಷ ಸಾಲ ಸೌಲಭ್ಯ ನೀಡಲಾಗುವುದು. ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಲ್ಲಿಂದ ಬರಬೇಕಿದ್ದ ಎಣ್ಣೆ ಪದಾರ್ಥಗಳು ಬರುತ್ತಿಲ್ಲ.‌ ಖಾದ್ಯ ತೈಲ ಉತ್ಪಾದನೆಯಲ್ಲಿ ಆತ್ಮ ನಿರ್ಭರ (ಸ್ವಾವಲಂಬನೆ)ವಾಗಲು ಎಣ್ಣೆ ಬೀಜಗಳ‌ ಕಿಟ್ ನೀಡಲಾಗುತ್ತಿದೆ' ಎಂದರು.

ಬೆಳೆ ಪ್ರಮಾಣ ಕುಸಿತ: ರಾಜ್ಯದಲ್ಲಿ ಮೊದಲು 13 ಲಕ್ಷ ‌ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ, ಕುಸುಬೆ, ಸಾಸಿವೆಯಂತಹ ಎಣ್ಣೆ ಕಾಳುಗಳನ್ನು ಬೆಳೆಯುತ್ತಿದ್ದರು. ಈಗ ಆ ಪ್ರಮಾಣ 3 ಲಕ್ಷ ಎಕರೆಗೆ ಕುಸಿದೆ. ರೈತರಿಗೆ ಅಗತ್ಯವಿರುವ ಎಲ್ಲ ನೆರವು ನೀಡುವ ಮೂಲಕ ಉತ್ಪಾದನಾ ಕ್ಷೇತ್ರವನ್ನು ಹೆಚ್ಚಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ADVERTISEMENT

ಮಾಡಾಳ್ ಲಂಚ: ಮೌನಕ್ಕೆ ಶರಣಾದ ಶೋಭಾ!

ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಅವರನ್ನು ಲಂಚ‌ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿರುವ ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿರುವ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವೆ ಶೋಭಾ ಕರಂದ್ಲಾಜೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.