ಬೆಳಗಾವಿ: ‘ಸುವರ್ಣ ವಿಧಾನಸೌಧದಲ್ಲಿ ಡಿ.29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಘೋಷಿಸಿದ್ದ 2ಡಿ ಮೀಸಲಾತಿಗೆ ಇಂದಿಗೂ ಅಧಿಸೂಚನೆ ಹೊರಡಿಸದ್ದರಿಂದ ಆ ನಿರ್ಣಯ ತಿರಸ್ಕರಿಸಿದ್ದೇವೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಂಗಳವಾರ ತಿಳಿಸಿದ್ದಾರೆ.
ಅಲ್ಲದೇ, ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ಗೆ ಸಮನಾದ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಎರಡು ದಿನಗಳ ಗಡುವನ್ನೂ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರಿಸಲು ವಾರದಲ್ಲೇ ಅಧಿಸೂಚನೆ ಹೊರಡಿಸಿದ ಸರ್ಕಾರ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ದೂರಿದರು.
‘ನಮ್ಮ ಬೇಡಿಕೆ ಕುರಿತು ಜ.12ರೊಳಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ತಪ್ಪಿದಲ್ಲಿ 13ರಂದು ಶಿಗ್ಗಾವಿಯಲ್ಲಿರುವ ಬೊಮ್ಮಾಯಿ ನಿವಾಸದ ಎದುರು ಸತ್ಯಾಗ್ರಹ ನಡೆಸಿ, ಅಲ್ಲಿಯೇ ಸಂಕ್ರಾಂತಿ ಆಚರಿಸುತ್ತೇವೆ. ನ್ಯಾಯ ಸಿಕ್ಕರಷ್ಟೇ ಹಬ್ಬ ಆಚರಿಸುತ್ತೇವೆ’ ಎಂದರು.
‘ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ’
ಹುಬ್ಬಳ್ಳಿ: ‘ಸರ್ಕಾರ ಕಾನೂನು ಚೌಕಟ್ಟಿನಲ್ಲೇ ಮೀಸಲಾತಿ ನೀಡಲಿದೆ. ಪ್ರವರ್ಗ–2 ಬೇಡಿಕೆ ವಿಷಯದಲ್ಲಿ ಮೊದಲ ಹಂತದ ನಿರ್ಣಯ ಕೈಗೊಳ್ಳಲಾಗಿದೆ. ಎರಡನೇ ಹಂತದ ನಿರ್ಣಯ ಬಾಕಿ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಬದಲು, 2ಎ ಮೀಸಲಾತಿಯೇ ಬೇಕು’ ಎಂಬ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಆಗ್ರಹ ಕುರಿತು, ನಗರದಲ್ಲಿ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.