ADVERTISEMENT

ಯಲ್ಲಾಪುರ: ಪಾಲಕರೇ ಹಸುಗೂಸಿನ ಹತ್ಯೆ ಆರೋಪಿಗಳು

ಗಂಡು ಮಗು ಆಗಲಿಲ್ಲವೆಂದು ಹೆಣ್ಣು ಮಗುವನ್ನು ಸಾಯಿಸಿದ ಅಪ್ಪ–ಅಮ್ಮ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 13:50 IST
Last Updated 5 ಆಗಸ್ಟ್ 2020, 13:50 IST
ಕೊಲೆ ಆರೋಪಿಗಳಾದ ಚಂದ್ರಶೇಖರ ಮತ್ತು ಪ್ರಿಯಾಂಕಾ ಭಟ್ಟ ದಂಪತಿ
ಕೊಲೆ ಆರೋಪಿಗಳಾದ ಚಂದ್ರಶೇಖರ ಮತ್ತು ಪ್ರಿಯಾಂಕಾ ಭಟ್ಟ ದಂಪತಿ   

ಯಲ್ಲಾಪುರ: ಐದು ದಿನಗಳ ಹಿಂದೆ ನಡೆದ 40 ದಿನಗಳ ಹಸುಗೂಸಿನ (ಹೆಣ್ಣು ಮಗು) ನಾಪತ್ತೆ ಪ್ರಕರಣ ಭೇದಿಸಿರುವ ಇಲ್ಲಿನ ಪೊಲೀಸರು, ಸ್ವಂತ ಮಗುವನ್ನೇ ಹತ್ಯೆಗೈದಿರುವ ಪಾಲಕರನ್ನು ಬಂಧಿಸಿದ್ದಾರೆ.

ಚಂದ್ರಶೇಖರ ಭಟ್ಟ ಮತ್ತು ಪ್ರಿಯಾಂಕಾ ಭಟ್ಟ ದಂಪತಿ ಹತ್ಯೆಯ ಆರೋಪಿಗಳು. ತಾಲ್ಲೂಕಿನ ರಾಮನಕೊಪ್ಪದಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಹಸುಗೂಸು, ಶನಿವಾರ ರಾತ್ರಿ 2.30ರ ಸುಮಾರಿಗೆ ಕಾಣೆಯಾಗಿದ್ದ ಬಗ್ಗೆ ಪಾಲಕರು ಊರವರಿಗೆ ತಿಳಿಸಿದ್ದರು. ಮಧ್ಯರಾತ್ರಿಯಿಂದಲೇ ಊರವರು ಮಗುವಿಗಾಗಿ ಹುಡುಕಾಟ ನಡೆಸಿದ್ದರು. ಸೋಮವಾರ ಬೆಳಿಗ್ಗೆ ನೀರು ತರಲು ಹೋದವರಿಗೆ ಮಗುವಿನ ಶವ ಬಾವಿಯಲ್ಲಿ ಕಂಡಿತ್ತು.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ‘ವನದೇವತೆ ಚೌಡಿ, ಮಗುವನ್ನು ಅಡಗಿಸಿಟ್ಟಿದೆ ಎಂದು ಮಗುವಿನ ತಂದೆ–ತಾಯಿ ನಾಟಕ ಮಾಡಿದ್ದರು. ಮಗು ಕಾಣೆಯಾದ ರಾತ್ರಿ ಮನೆಯ ಹೊರ ಬಾಗಿಲಿನ ಚಿಲಕ ತೆಗೆದಿದ್ದು ಕಂಡು ಬಂದಿತ್ತು. ಇದೇ ಜಾಡು ಹಿಡಿದು ತನಿಖೆ ತೀವ್ರಗೊಳಿಸಲಾಗಿತ್ತು. ಗಂಡು ಮಗು ಆಗಲಿಲ್ಲ ಎಂಬ ಕಾರಣಕ್ಕೆ ತಂದೆ–ತಾಯಿಯೇ ಮಗುವನ್ನು ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಸ್ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ, ಪಿಐ ಸುರೇಶ ಯಳ್ಳೂರ, ಮಂಜುನಾಥ ಗೌಡರ್, ಬಸವರಾಜು, ಎಎಸ್‌ಐಗಳಾದ ಮಂಜುನಾಥ ಮನ್ನಂಗಿ, ಆನಂದ ಪಾವಸ್ಕರ, ಸಿಬ್ಬಂದಿ ರವಿ ತಾಂಡೇಲ, ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ನೀಲನ ಮೋರೆ, ಶೋಭಾ ನಾಯ್ಕ, ದೀಪಾ ಪೈ, ಶಿಲ್ಪಾ ಗೌಡ, ಕೃಷ್ಣ ಮಾತ್ರೋಜಿ, ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.