ಬೆಂಗಳೂರು: ‘ದಾಸ್ತಾನು (ಸ್ಟಾಕ್) ಇಟ್ಟುಕೊಂಡಿರುವ ಸಕ್ಕರೆಯನ್ನು ಮಾರಾಟ ಮಾಡಿಯಾದರೂ, ಕಬ್ಬು ಬೆಳಗಾರರ ಬಾಕಿ ಹಣ ಪಾವತಿ ಮಾಡಿ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸೂಚಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ ಅವರು, ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವುದಕ್ಕೆ ವಿವರಣೆ ಪಡೆದರು.
‘ಕೇಂದ್ರದ ಕೆಲ ನೀತಿಗಳಿಂದ ಸಕ್ಕರೆಯ ಸ್ಟಾಕ್ ಹಾಗೆಯೇ ಇದೆ. ಇದರಿಂದ ನಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬಾಕಿ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರವು ನಮ್ಮ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರಬೇಕು’ ಎಂದು ಕಾರ್ಖಾನೆಗಳ ಮಾಲೀಕರು ಮನವಿ ಮಾಡಿದರು.
ಅದಕ್ಕೆ ಮುಖ್ಯಮಂತ್ರಿ, ‘ನಿಮ್ಮ ಕಷ್ಟಗಳ ಕುರಿತು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಈಗ ರೈತರು ಸಂಕಷ್ಟದಲ್ಲಿದ್ದಾರೆ. ದಾಸ್ತಾನಿರುವ ಸಕ್ಕರೆಯನ್ನು ಮಾರಾಟ ಮಾಡಿ ಕೂಡಲೇ ಅವರಿಗೆ ಹಣ ಪಾವತಿಸಿ’ ಎಂದು ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏಳು ಸಹಕಾರಿ ಹಾಗೂ ಎರಡು ಖಾಸಗಿ ಕಾರ್ಖಾನೆಗಳು, ಕಬ್ಬು ಬೆಳೆಗಾರರ ₹ 1,045 ಕೋಟಿಯನ್ನು ಬಾಕಿ ಉಳಿಸಿಕೊಂಡಿವೆ. ಕಾರ್ಖಾನೆಗಳಿಂದ ₹ 200 ಕೋಟಿ ವಿದ್ಯುತ್ ಬಿಲ್ ಬರಬೇಕಿದ್ದು, ಸದ್ಯ ಅದನ್ನೂ ಬದಿಗಿರಿಸಿದ್ದೇವೆ. ಸರ್ಕಾರ ಸಹಕಾರ ನೀಡಿದರೂ, ಮಾಲೀಕರು ರೈತರ ಹಣ ಬಾಕಿ ಇಟ್ಟುಕೊಂಡಿರುವುದು ಸರಿಯಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.