ಬೆಂಗಳೂರು:ಹನ್ನೆರಡು ದಿನಗಳ ಹಿಂದೆ ಕೃಷ್ಣೈಕ್ಯರಾಗಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಆರಾಧನೋತ್ಸವ ಗುರುವಾರ ನಗರದವಿದ್ಯಾಪೀಠದ ಆವರಣದಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆಯಿತು.
ಮಾಧ್ವ ಸಂಪ್ರದಾಯದಂತೆ ನಸುಕಿನಿಂದಲೇ ವಿರಾಜ ಹೋಮ ಸಹಿತ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದವು. ಚತುರ್ವಿಂಶತಿಆರಾಧನೆ ಹಾಗೂ 108 ವಿದ್ವಾಂಸರ ಪಾದಪೂಜೆ ನಡೆಯಿತು. ಹಲವು ವಿಶೇಷ ಪೂಜೆಗಳೂ ನಡೆದವು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆ ಸಂಕೀರ್ತನೆ ನಡೆದರೆ, ಸಂಜೆ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿ, ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರು ಸರದಿಯಲ್ಲಿ ಸಾಗಿ ಬೃಂದಾವನ ದರ್ಶನ ಪಡೆದರು. 12 ಸಾವಿರಕ್ಕೂ ಅಧಿಕ ಮಂದಿಗೆ ಮಹಾ ಅನ್ನಸಂತರ್ಪಣೆ ನಡೆಯಿತು. ದೇಶದ 42 ಕಡೆಗಳಲ್ಲಿ ಪೇಜಾವರ ಮಠದ ಶಾಖಾ ಮಠಗಳಿದ್ದು, ಅಲ್ಲೆಲ್ಲ ಅನ್ನಸಂತರ್ಪಣೆ ನಡೆಯಿತು.
ಇದೇ 11ರಂದು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.