ADVERTISEMENT

ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿ ಉಪದಾನ

ರಾಜ್ಯ ಸರ್ಕಾರದಿಂದ ಆದೇಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 20:06 IST
Last Updated 25 ಜೂನ್ 2018, 20:06 IST

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ವ್ಯಾಪ್ತಿಯಲ್ಲಿರುವ ನೌಕರರಿಗೆ 2018ರ ಏ.1‌ರಿಂದ ಜಾರಿಗೆ ಬರುವಂತೆ ನಿವೃತ್ತಿ ಉಪದಾನ (ಫೈನಲ್ ಸೆಟ್ಲ್‌ ಮೆಂಟ್‌) ಸೌಲಭ್ಯ ಕಲ್ಪಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಆರನೇ ವೇತನ ಆಯೋಗವು ಎನ್‌ಪಿಎಸ್‌ ವ್ಯಾಪ್ತಿಯ ನೌಕರರಿಗೆ ನಿವೃತ್ತಿ ಉಪದಾನ (ಗರಿಷ್ಠ ₹20 ಲಕ್ಷದವರೆಗೆ) ನೀಡುವಂತೆ ಶಿಫಾರಸು ಮಾಡಿದೆ. ಇದನ್ನು ಸರ್ಕಾರ ಅನುಷ್ಠಾನ ಮಾಡಿದೆ.

2006ರ ಏಪ್ರಿಲ್‌ 1ರ ನಂತರ ಸೇರಿದ ನೌಕರರಿಗೆ ಪಿಂಚಣಿ ಹಾಗೂ ನಿವೃತ್ತಿ ಉಪದಾನ ಸೌಲಭ್ಯವನ್ನು ಸರ್ಕಾರಿ ಬೊಕ್ಕಸದಿಂದ ನೀಡುತ್ತಿಲ್ಲ. ಇವರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಲು ನೌಕರರು ವೇತನದಲ್ಲಿ ವಂತಿಗೆ ನೀಡುವ ಎನ್‌ಪಿಎಸ್ ವ್ಯವಸ್ಥೆ ಜಾರಿಯಲ್ಲಿದೆ. ನಿವೃತ್ತಿಯವರೆಗೆ ನೌಕರ ಪಾವತಿಸುವ ವಂತಿಗೆ ಆಧರಿಸಿ ನಿವೃತ್ತಿ ಉಪದಾನ ಹಾಗೂ ಪಿಂಚಣಿ ಪಡೆಯಲು ಅವಕಾಶ ಇದೆ.

ADVERTISEMENT

ಸಂಘದ ಆಕ್ಷೇಪ: ‘2006ರಿಂದ ಕೆಲಸಕ್ಕೆ ಸೇರಿದ ಹಾಗೂ ಅವರ ಪೈಕಿ ನಿಧನರಾದ ನೌಕರರ ಅವಲಂಬಿತರಿಗೆ ಕುಟುಂಬ ಪಿಂಚಣಿ ನೀಡಬೇಕು ಎಂಬ ಬೇಡಿಕೆ ಮಂಡಿಸಿದ್ದೆವು. ಆದರೆ, ಅದನ್ನು 2018ರ ಏಪ್ರಿಲ್‌ನಿಂದ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ. 12 ವರ್ಷಗಳ ಅವಧಿಯಲ್ಲಿ 1,000 ಕ್ಕೂ ಹೆಚ್ಚು ನೌಕರರು ಮೃತಪಟ್ಟಿದ್ದಾರೆ. ಅವರ ಅವಲಂಬಿತರಿಗೆ ಪೂರ್ವಾನ್ವಯಗೊಳಿಸಿ ಕುಟುಂಬ ಪಿಂಚಣಿ ನೀಡಬೇಕು’ ಎಂದು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಆಗ್ರಹಿಸಿದ್ದಾರೆ.

6 ವೇತನ ಆಯೋಗವು ಎನ್‌ಪಿಎಸ್ ನೌಕರರಿಗೆ ನಿವೃತ್ತಿ ಉಪದಾನ (ಗರಿಷ್ಠ ₹20 ಲಕ್ಷ) ನೀಡಲು ಶಿಫಾರಸು ಮಾಡಿದೆ. ಇದನ್ನು ಸರ್ಕಾರ ಅನುಷ್ಠಾನ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.