ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ (ಐ ಮಾನಿಟರಿ ಅಡ್ವೈಸರಿ) ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ ಮತ್ತು ಅಜಯ್ ಹಿಲೋರಿ ಅವರನ್ನು ತನಿಖೆಗೆ ಒಳಪಡಿಸಲು ಸಿಬಿಐ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಐಎಂಎ ಕಂಪನಿಗೆ ‘ಕ್ಲೀನ್ಚಿಟ್’ ನೀಡಿ ಭಾರಿ ಲಂಚ ಪಡೆದಿರುವ ಆರೋಪವನ್ನು ಈ ಇಬ್ಬರು ಅಧಿಕಾರಿಗಳು ಎದುರಿಸುತ್ತಿದ್ದಾರೆ. ಇವರ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಸಿಬಿಐ ಪತ್ರ ಬರೆದಿತ್ತು.
ಐಎಂಎ ವಂಚನೆಯ ತನಿಖೆಯನ್ನು ರಾಜ್ಯ ಸರ್ಕಾರ ಆಗಸ್ಟ್ನಲ್ಲಿ ಸಿಬಿಐಗೆ ವಹಿಸಿತ್ತು. ಆಗಸ್ಟ್ 30ರಂದು ಮನ್ಸೂರ್ ಖಾನ್ ಒಡೆತನದ ಸಮೂಹ ಕಂಪನಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಈಗಾಗಲೇ ಐಎಂಎ ವಿರುದ್ಧ ಸಿಬಿಐ ಎರಡು ದೋಷಾರೋಪ ಪಟ್ಟಿ ಸಲ್ಲಿಸಿದೆ.
ಐಎಂಎ ಸಮೂಹದ ಕಂಪನಿಗಳ ವಿರುದ್ಧ ದೂರು ಕೇಳಿಬಂದಾಗ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಐಜಿ ಆಗಿದ್ದ ಹೇಮಂತ್ ನಿಂಬಾಳ್ಕರ ತನಿಖೆ ನಡೆಸಿದ್ದರು. ಐಎಂಎ ಪರವಾಗಿ ವರದಿಗಳನ್ನು ಸಿದ್ಧಪಡಿಸಿ ಕ್ಲೀನ್ ಚಿಟ್ ನೀಡಿದ್ದರು. ಹಾಗಾಗಿ, ಐಎಂಎ ವಿರುದ್ಧ ಯಾವುದೇ ಕ್ರಮ ಜರುಗಿಸಲು ಯಾರೂ ಮುಂದಾಗಲಿಲ್ಲ. ಐಎಂಎ ವಂಚನೆ ಮುಂದುವರಿಯಲು ಇದು ಕಾರಣವಾಗಿತ್ತು.
ಐಎಂಎ ಸಂಸ್ಥೆಯ ಮುಖ್ಯಸ್ಥ, ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನೀಡಿದ್ದ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಅಜಯ್ ಹಿಲೋರಿ ಡಿಸಿಪಿ ಆಗಿದ್ದ ಸಂದರ್ಭದಲ್ಲಿ ಅವರಿಗೆ ₹ 20 ಕೋಟಿ ಲಂಚ ನೀಡಿರುವುದಾಗಿ ಮನ್ಸೂರ್ ವಿಚಾರಣೆ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.